ಅರುಂಧತಿ ರಾಯ್ (ಜನನ 1961 ನವೆಂಬರ್ 24) ಒಬ್ಬ ಭಾರತೀಯ ಕಾದಂಬರಿಗಾರ್ತಿ. ಅವರು 1997ರಲ್ಲಿ ತಮ್ಮ ಕಾದಂಬರಿ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ಗಾಗಿ ಬುಕರ್ ಪ್ರಶಸ್ತಿ ಗಳಿಸಿದರು. ಇದಲ್ಲದೆ, ಎರಡು ಚಿತ್ರಕಥೆಗಳು ಹಾಗೂ ಪ್ರಬಂಧಗಳ ಜೊತೆಗೇ ಅನೇಕ ಲೇಖನಗುಚ್ಛಗಳನ್ನು ಹೊರ ತಂದಿದ್ದಾರೆ. ವಿವಿಧ ಸಾಮಾಜಿಕ, ಪರಿಸರೀಯ ಮತ್ತು ರಾಜಕೀಯ ವಿಷಯಗಳ ಬಗೆಗಿನ ಅವರ ಬರೆಹಗಳು ಭಾರತದಲ್ಲಿ ಬಹಳಷ್ಟು ವಿವಾದಗಳಿಗೆ ಕಾರಣವಾಗಿವೆ. == ಆರಂಭಿಕ ಜೀವನ ಮತ್ತು ಹಿನ್ನೆಲೆ == ಅರುಂಧತಿ ರಾಯ್ ಭಾರತ ದೇಶದ ಮೇಘಾಲಯ ರಾಜ್ಯದ ಶಿಲ್ಲಾಂಗ್‌ನಲ್ಲಿ, ಜನಿಸಿದರು. ಅವರ ತಾಯಿ ಮೇರಿ ರಾಯ್ ಕೇರಳೀಯ ಸಿರಿಯನ್ ಕ್ರಿಶ್ಚಿಯನ್ ಪಂಗಡದವರಾಗಿದ್ದು, ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿ ಅದರ ಪ್ರತಿಪಾದಕರಾಗಿದ್ದರು. ಅರುಂಧತಿ ರಾಯ್ ಅವರ ತಂದೆ ರಣಜಿತ್‌ ರಾಯ್‌ ಬಂಗಾಲ ಮೂಲದ ವೃತ್ತಿಪರ ಚಹಾ ತೋಟಗಾರರಾಗಿದ್ದರು. ಅವರು ತಮ್ಮ ಬಾಲ್ಯವನ್ನು ಕೇರಳದ ಐಮನಮ್‌ದಲ್ಲಿ ಕಳೆದರು. ಕೊಟ್ಟಾಯಂನ ಕಾರ್ಪಸ್ ಕ್ರಿಸ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದ ಅರುಂಧತಿ ನಂತರ ತಮಿಳುನಾಡಿನ ನೀಲಗಿರಿಯಲ್ಲಿರುವ ಲವ್‌ಡೇಲ್‌ನ ಲಾರೆನ್ಸ್ ಸ್ಕೂಲ್ ಸೇರಿದರು. ನಂತರ ನವದೆಹಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್‌ನಲ್ಲಿ ವಾಸ್ತು ಶಾಸ್ತ್ರ ಅಧ್ಯಯನ ಮಾಡಿದರು. ಅಲ್ಲಿಯೇ ಅರುಂಧತಿಯವರು ತಮ್ಮ ಮೊದಲ ಪತಿ, ವಾಸ್ತುಶಿಲ್ಪಿ ಗೆರಾರ್ಡ್ ಡ ಕುನ್ಹಾ ಅವರನ್ನು ಭೆಟ್ಟಿಯಾದರು. 1984ರಲ್ಲಿ ಅರುಂಧತಿ ರಾಯ್ ತಮ್ಮ ಎರಡನೆ ಪತಿ, ಚಿತ್ರನಿರ್ಮಾಪಕ ಪ್ರದೀಪ್ ಕೃಷ್ಣ ಅವರನ್ನು ಭೆಟ್ಟಿಯಾದರು. ಅವರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮಾಸ್ಸೇ ಸಾಹಿಬ್‌ ನಲ್ಲಿ ಅರುಂಧತಿ ಒಬ್ಬ ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿದರು. ತಮ್ಮ ಕಾದಂಬರಿ 'ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌' ಯಶಸ್ವಿಯಾಗಿ ಅದರಿಂದ ಅರುಂಧತಿಗೆ ಹಣಕಾಸಿನ ಸ್ಥಿರತೆ ಲಭಿಸಿತು. ಅದಕ್ಕಿಂತ ಮೊದಲು ನವದೆಹಲಿಯ ಪಂಚತಾರಾ ಹೊಟೇಲುಗಳಲ್ಲಿ ಏರೋಬಿಕ್ಸ್ ವ್ಯಾಯಾಮ ತರಗತಿಗಳನ್ನು ನಡೆಸುವುದು ಸೇರಿದಂತೆ, ಅವರು ಇತರೆ ಕೆಲಸಗಳನ್ನೂ ಮಾಡಿದರು. ಅರುಂಧತಿ, ಭಾರತೀಯ ಮಾಧ್ಯಮದ ಚಿರಪರಿಚಿತ ವ್ಯಕ್ತಿ ಹಾಗೂ ಪ್ರಮುಖ ಮಾಧ್ಯಮ ಸಂಸ್ಥೆ ಎನ್‌ಡಿಟಿವಿಯ ಮುಖ್ಯಸ್ಥ ಪ್ರಣಯ್‌ ರಾಯ್‌ಗೆ ಅರುಂಧತಿ ಸಹೋದರ ಸಂಬಂಧಿ. ಅರುಂಧತಿ ಸದ್ಯ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. == ವೃತ್ತಿಜೀವನ == === ಸಾಹಿತ್ಯ ಜೀವನ === === ಆರಂಭದ ವೃತ್ತಿ: ಚಿತ್ರಕಥೆಗಳು === ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅರುಂಧತಿ ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅವರ ಪತಿ 1989ರಲ್ಲಿ ನಿರ್ದೇಶಿಸಿದ ಇನ್ ವಿಚ್ ಆನ್ನಿ ಗಿವ್ಸ್ ಇಟ್ ದೋಸ್ ಒನ್ಸ್‌ ಗಾಗಿ ಅರುಂಧತಿ ಚಿತ್ರಕಥೆ ಬರೆದರು. ಅವರು ವಾಸ್ತುಶಿಲ್ಪದ ವಿದ್ಯಾರ್ಥಿನಿಯಾಗಿದ್ದಾಗ ಪಡೆದ ಅನುಭವಗಳನ್ನು ಆಧರಿಸಿದ ಚಲನಚಿತ್ರವಿದು. ಈ ಚಿತ್ರದಲ್ಲಿ ಒಬ್ಬ ಕಲಾವಿದೆಯಾಗಿ ಕಾಣಿಸಿಕೊಂಡರು. ಅಲ್ಲದೆ, 1992ರಲ್ಲಿ ಬಿಡುಗಡೆಯಾದ ಎಲೆಕ್ಟ್ರಿಕ್ ಮೂನ್‌ ಚಲನಚಿತ್ರಕ್ಕೂ ಚಿತ್ರಕಥೆ ರಚಿಸಿದ್ದರು. ಫೂಲನ್ ದೇವಿಯ ಜೀವನವನ್ನು ಆಧರಿಸಿದ, 1994ರಲ್ಲಿ ಬಿಡುಗಡೆಯಾದ ಶೇಖರ್ ಕಪೂರ್ ನಿರ್ದೇಶನದ ಚಲನಚಿತ್ರ ಬ್ಯಾಂಡಿಟ್ ಕ್ವೀನ್‌ ನ್ನು ಟೀಕಿಸಿ ಅರುಂಧತಿ ಗಮನ ಸೆಳೆದರು. 'ದಿ ಗ್ರೇಟ್ ಇಂಡಿಯನ್ ರೇಪ್ ಟ್ರಿಕ್' ಎಂಬ ಶೀರ್ಷಿಕೆಯಡಿ ಈ ಚಲನಚಿತ್ರದ ಬಗ್ಗೆ ತಮ್ಮ ವಿಮರ್ಶೆಯಲ್ಲಿ, 'ಮಹಿಳೆಯೊಬ್ಬಳು ಜೀವಂತವಿರುವಾಗ ಆಕೆಯ ಮೇಲೆ ನಡೆದ ಅತ್ಯಾಚಾರವನ್ನು ಆಕೆಯ ಅನುಮತಿಯಿಲ್ಲದೆ ಮರುಪ್ರದರ್ಶಿಸಿದ' ಹಕ್ಕನ್ನು ಪ್ರಶ್ನಿಸಿದರು. 'ಶೇಖರ್‌ ಕಪೂರ್ ಫೂಲನ್‌ ದೇವಿಯನ್ನು ಶೋಷಣೆ ಮಾಡಿದ್ದಾರೆ ಮತ್ತು ಆಕೆಯ ಜೀವನ ಮತ್ತು ಅದರ ಅರ್ಥವನ್ನು ತಪ್ಪಾಗಿ ನಿರೂಪಿಸಿದ್ದಾರೆ' ಎಂದು ಆರೋಪಿಸಿದರು. === ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ === ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ತಮ್ಮ ಮೊದಲ ಕಾದಂಬರಿಯನ್ನು 1992ರಲ್ಲಿ ಬರೆಯಲಾರಂಭಿಸಿದ ಅರುಂಧತಿ, 1996ರಲ್ಲಿ ಸಂಪೂರ್ಣಗೊಳಿಸಿದರು. ಈ ಕಾದಂಬರಿಯು ಸ್ವಲ್ಪಮಟ್ಟಿಗೆ ಆತ್ಮಚರಿತ್ರೆಯೆನಿಸಿದೆ. ಇದರ ಬಹಳಷ್ಟು ಭಾಗವು ಐಮಾನಮ್‌ನಲ್ಲಿಯ ತಮ್ಮ ಬಾಲ್ಯಜೀವನದ ಅನುಭವಗಳನ್ನು ವಿವರಿಸುತ್ತದೆ. ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌ ನ ಪ್ರಕಟಣೆಯು ಅರುಂಧತಿಗೆ ಶೀಘ್ರ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿಕೊಟ್ಟಿತು. 1997ರಲ್ಲಿ ಭಾವನಾತ್ಮಕ,ಕಾಲ್ಪನಿಕ ಕಥಾನಕ ವಿಭಾಗದಲ್ಲಿ ಅರುಂಧತಿಗೆ ಬುಕರ್‌ ಪ್ರಶಸ್ತಿ ಲಭಿಸಿತು. ಅದೇ ವರ್ಷ ನ್ಯೂಯಾರ್ಕ್‌ ಟೈಮ್ಸ್ ‌ ಪಟ್ಟಿ ಮಾಡಿ ಹೆಸರಿಸಿದ ಗಮನಾರ್ಹ ಪುಸ್ತಕಗಳಲ್ಲಿ ಇದೂ ಸೇರಿಕೊಂಡಿತು. ನ್ಯೂಯಾರ್ಕ್‌ ಟೈಮ್ಸ್ ‌ ಘೋಷಿಸಿದ, ಸ್ವತಂತ್ರ ಕಥೆಗಳ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಯಲ್ಲಿ ಅರುಂಧತಿಯ ಪುಸ್ತಕ ನಾಲ್ಕನೆಯ ಸ್ಥಾನ ಗಳಿಸಿತು. ಈ ಪುಸ್ತಕವು ಆರಂಭದಿಂದಲೂ ವಾಣಿಜ್ಯ ದೃಷ್ಟಿಯಿಂದ ಯಶಸ್ವಿಯಾಗಿತ್ತು. ಅರುಂಧತಿ ಐದು ಲಕ್ಷ ಪೌಂಡ್‌ ಹಣವನ್ನು ಮುಂಗಡವಾಗಿ ಪಡೆದುಕೊಂಡರು. ಇದು ಮೇ ತಿಂಗಳಿನಲ್ಲಿ ಪ್ರಕಟವಾಯಿತು. ಜೂನ್ ಕೊನೆಯ ವೇಳೆಗೆ ಈ ಪುಸ್ತಕವು ಹದಿನೆಂಟು ದೇಶಗಳಲ್ಲಿ ಮಾರಾಟವಾಯಿತು. ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಹಲವು ಪ್ರಮುಖ ಅಮೆರಿಕದ ಪತ್ರಿಕೆಗಳಲ್ಲಿ ತಾರಾ ಮಟ್ಟದ ಅತ್ಯುತ್ತಮ ವಿಮರ್ಶೆ ಗಳಿಸಿತು. ದಿ ನ್ಯೂ ಯಾರ್ಕ್ ಟೈಮ್ಸ್ ಪ್ರಕಾರ, ಇದು ಒಂದು 'ಬೆರಗುಗೊಳಿಸುವ ಮೊದಲ ಕಾದಂಬರಿ,' 'ಅಸಾಮಾನ್ಯ', 'ಏಕಕಾಲಕ್ಕೆ ನೈತಿಕವಾಗಿ ತ್ರಾಸದಾಯಕವೂ ಮತ್ತು ಕಾಲ್ಪನಿಕವಾಗಿ ಸುಲಭವೇದ್ಯವೂ ಆದ ಕೃತಿ'; ಲಾಸ್ ಎಂಜಿಲಿಸ್ ಟೈಮ್ಸ್ ಪ್ರಕಾರ 'ತೀಕ್ಷ್ಣತೆಯ ಮತ್ತು ಗಮನಾರ್ಹವಾಗಿ ಮನಸೆಳೆಯುವ ಒಂದು ಕಾದಂಬರಿ'; ಕೆನಡಾದ ಟೋರಂಟೋ ಸ್ಟಾರ್ ಸೇರಿದಂತ ಇತರೆ ಪ್ರಕಟಣೆಗಳ ಪ್ರಕಾರ, 'ಒಂದು ರಸಭರಿತ, ಮಾಂತ್ರಿಕ ಕಾದಂಬರಿ'. ದಿ ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್ ಕಾದಂಬರಿಯು 1997ರ ವರ್ಷದ ಅಂತ್ಯದಲ್ಲಿ ಟೈಮ್ ‌ ಪತ್ರಿಕೆಯ ಐದು ಅತ್ಯುತ್ತಮ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಈ ಪುಸ್ತಕಕ್ಕೆ ವಿಮರ್ಶಾತ್ಮಕ ಪ್ರತಿಕ್ರಿಯೆಯು ಅಷ್ಟೇನೂ ಸಕಾರಾತ್ಮಕವಾಗಿರಲಿಲ್ಲ. 1996ರಲ್ಲಿ ಬುಕರ್‌ ಪ್ರಶಸ್ತಿ ತೀರ್ಪುಗಾರರ ಸದಸ್ಯ ಕಾರ್ಮೆನ್‌ ಕಾಲಿಲ್‌ ಈ ಕಾದಂಬರಿಯನ್ನು 'ಅಸಹ್ಯ' ಎಂದು ಜರಿದರು. 'ಈ ಕಾದಂಬರಿ ಬಹಳ ನಿರಾಸೆಗೊಳಿಸುತ್ತದೆ' ಎಂದು ದಿ ಗಾರ್ಡಿಯನ್‌ ಟೀಕಿಸಿತು. ಭಾರತದಲ್ಲಿ, ಅರುಂಧತಿಯ ಮೂಲ ರಾಜ್ಯ ಕೇರಳದ ಅಂದಿನ ಮುಖ್ಯಮಂತ್ರಿ ಇ. ಕೆ. ನಯನಾರ್ ‌ಅವರು, ಈ ಪುಸ್ತಕದಲ್ಲಿ ಲೈಂಗಿಕ ಕ್ರಿಯೆಗಳನ್ನು ಯಾವುದೇ ನಿರ್ಭಂಧವಿಲ್ಲದೇ ವರ್ಣಿಸಿದ್ಕಕ್ಕಾಗಿ ಕಟುವಾಗಿ ಟೀಕಿಸಿದ್ದರು. ಇದರಿಂದ ಅರುಂಧತಿ ರಾಯ್‌ ಅಶ್ಲೀಲತೆಯ ಆರೋಪಗಳನ್ನು ಎದುರಿಸಬೇಕಾಯಿತು. === ನಂತರದ ವೃತ್ತಿ === ತಮ್ಮ ಕಾದಂಬರಿಯ ಯಶಸ್ಸಿನ ಬಳಿಕ ಅರುಂಧತಿ ಮತ್ತೊಮ್ಮೆ ಚಿತ್ರಕಥೆ ಬರೆಹಗಾರರಾದರು. ಟೀವಿ ಧಾರಾವಾಹಿ ದಿ ಬನ್ಯನ್ ಟ್ರೀ , ಹಾಗೂ ಡ್ಯಾಂ/ಏಜ್: ಎ ಫಿಲ್ಮ್ ವಿಥ್ ಅರುಂಧತಿ ರಾಯ್ (2002) ಎಂಬ ಸಾಕ್ಷ್ಯಚಿತ್ರಕ್ಕಾಗಿ ಚಿತ್ರಕಥೆ ಬರೆದರು. 2007ರ ಆರಂಭದಲ್ಲಿ, ತಮ್ಮ ಎರಡನೆ ಕಾದಂಬರಿ ಬರೆಯಲಾರಂಭಿಸಿರುವುದಾಗಿ ಅರುಂಧತಿ ಪ್ರಕಟಿಸಿದರು. ವಿ ಆರ್ ಒನ್: ಎ ಸಿಲೆಬ್ರೇಷನ್ ಆಫ್ ಟ್ರೈಬಲ್ ಪೀಪಲ್ಸ್ ಪುಸ್ತಕಕ್ಕೆ ಕೊಡುಗೆ ನೀಡಿದವರಲ್ಲಿ ಅರುಂಧತಿ ರಾಯ್ ಕೂಡ ಒಬ್ಬರು, ಇದು 2009ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಯಿತು. ಈ ಪುಸ್ತಕವು ಜಗತ್ತಿನೆಲ್ಲೆಡೆಯ ಜನರ ಸಂಸ್ಕೃತಿಗಳನ್ನು ವಿವರಿಸುತ್ತದೆ. ಅವರ ವೈವಿಧ್ಯವನ್ನು ಚಿತ್ರಿಸುವುದಲ್ಲದೇ ಅವರ ಅಸ್ತಿತ್ವಕ್ಕೆ ಇರುವ ಅಪಾಯವನ್ನೂ ತಿಳಿಸುತ್ತದೆ. ಈ ಪುಸ್ತಕದ ಮಾರಾಟದಿಂದ ಬಂದ ಸಂಭಾವನೆ,ರಾಜಧನವು ಭಾರತೀಯ ಹಕ್ಕುಗಳ ಸಂಘಟನೆ ಸರ್ವೈವಲ್‌ ಇಂಟರ್ನ್ಯಾಷನಲ್‌ಗೆ ಸೇರಿತು. == ವಕಾಲತ್ತು ವಹಿಸುವಿಕೆ ಮತ್ತು ವಿವಾದ == ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟನೆ ಬಳಿಕ ಅರುಂಧತಿ ತಮ್ಮ ಸಮಯದ ಹೆಚ್ಚುಪಾಲನ್ನು ಮುಖ್ಯವಾಗಿ ಅಕಲ್ಪಿತ ವಸ್ತು ಕೃತಿ ರಚನೆ ಮತ್ತು ರಾಜಕೀಯಕ್ಕಾಗಿ ಮೀಸಲಿಟ್ಟರು. ಇನ್ನೂ ಎರಡು ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದರಲ್ಲದೇ, ಸಾಮಾಜಿಕ ವಿಚಾರಗಳಲ್ಲಿ ಸಕ್ರಿಯರಾಗತೊಡಗಿದರು. ಅವರು ಜಾಗತೀಕರಣ -ವಿರೋಧಿ/ಎಚ್ಚೆತ್ತ-ಜಾಗತೀಕರಣ ಚಳವಳಿಯ ವಕ್ತಾರರಾದರು; ಮತ್ತು ನವ-ಸಾಮ್ರಾಜ್ಯಶಾಹಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಜಾಗತಿಕ ನೀತಿಗಳ ಕುರಿತು ಭಾವಾವೇಶದ ಕಟು-ಟೀಕಾಕಾರರಾದರು. ಸದ್ಯ ಭಾರತದಲ್ಲಿ ಜಾರಿಯಲ್ಲಿರುವ ಪರಮಾಣು ಶಸ್ತ್ರಾಸ್ತ್ರ ನೀತಿ, ತ್ವರಿತ ಕೈಗಾರಿಕೀಕರಣದ ರೀತಿ ಹಾಗೂ ಲಂಗುಲಗಾಮಿಲ್ಲದ ಅಭಿವೃದ್ಧಿಯ ನೀತಿ-ಸೂತ್ರಗಳನ್ನು ಅರುಂಧತಿ ಕಟುವಾಗಿ ಟೀಕಿಸುತ್ತಿದ್ದಾರೆ. ನರ್ಮದಾ ಅಣೆಕಟ್ಟು ಯೋಜನೆ ಹಾಗೂ ಭಾರತದಲ್ಲಿ ವಿದ್ಯುತ್‌ ಸಂಸ್ಥೆ ಎನ್ರಾನ್‌ನ ಚಟುವಟಿಕೆಗಳೂ ಇವರ ಟೀಕೆಗೆ ಗುರಿಯಾಗಿದ್ದವು. === ಕಾಶ್ಮೀರಿ ಪ್ರತ್ಯೇಕತಾವಾದಕ್ಕೆ ಬೆಂಬಲ === 2008ರ ಆಗಸ್ಟ್‌ ತಿಂಗಳಲ್ಲಿ, ಭಾರತದ ಪ್ರಮುಖ ಇಂಗ್ಲಿಷ್‌ ದೈನಿಕ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ, ಅರುಂಧತಿ ರಾಯ್‌ ಕಾಶ್ಮೀರ ಭಾರತದಿಂದ ಬೇರ್ಪಟ್ಟು ಸ್ವಾತಂತ್ರ್ಯ ಹೊಂದುವುದರ ಪರ ಮಾತನಾಡಿದರು. ಆಗ ಸ್ವಾತಂತ್ರ್ಯ-ಪರ ಭಾರೀ ಧರಣಿಗಳು ನಡೆದಿದ್ದವು. ಅಮರನಾಥ್‌ ಭೂ ವರ್ಗಾವಣೆ ವಿವಾದದ ನಂತರ, 2008ರ ಆಗಸ್ಟ್‌ 18ರಂದು, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಶ್ಮೀರ ಭಾಗದ ಶ್ರೀನಗರದಲ್ಲಿ ಸುಮಾರು 500,000 ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯಕ್ಕಾಗಿ ಧರಣಿ ನಡೆಸಿದರು. ಅರುಂಧತಿ ಹೇಳಿದಂತೆ, ಕಾಶ್ಮೀರಿ ಜನರು ಭಾರತದಿಂದ ಬೇರೆಯಾಗಲು ಬಯಸುವುದಕ್ಕೆ ಈ ಚಳವಳಿಗಳು ಸೂಕ್ತ ಸಂಕೇತ. ಅರುಂಧತಿಯ ಈ ಹೇಳಿಕೆಯನ್ನು ಭಾರತದ ಪ್ರಮುಖ ರಾಜಕೀಯ ಪಕ್ಷಗಳಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ)‌ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಟುವಾಗಿ ಟೀಕಿಸಿದವು. 2010ರ ಅಕ್ಟೋಬರ್ ತಿಂಗಳಲ್ಲಿ, ನವದೆಹಲಿಯಲ್ಲಿ 'ಆಜಾದಿ - ಇದೊಂದೇ ದಾರಿ' (ಆಜಾದಿ ಎಂದರೆ 'ಸ್ವಾತಂತ್ರ್ಯ' ) ಎಂಬ ಒಂದು ವಿಚಾರಗೋಷ್ಠಿ ನಡೆಯಿತು. ಇಲ್ಲಿ ಅರುಂಧತಿ ರಾಯ್‌, ಹುರ್ರಿಯತ್‌ ಕಾನ್ಫೆರೆನ್ಸ್‌ ಮುಖಂಡ ಸಯದ್‌ ಅಲಿ ಷಾ ಜಿಲಾನಿ ಮತ್ತು ವರವರ ರಾವ್‌ ಒಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಶ್ಮೀರವು ಹಸಿವು ಮತ್ತು ನಿರ್ವಸ್ತ್ರ ಸ್ಥಿತಿ ಯನ್ನು ನಿರ್ಮಿಸಲು ಕಾರಣವಾಗುತ್ತಿರುವ ಹಿಂದೂಸ್ಥಾನದಿಂದ ಆಜಾದಿ ' ಪಡೆಯಬೇಕು ಎಂದು ಅರುಂಧತಿ ಹೇಳಿದ್ದು ವರದಿಯಾಯಿತು. ಅರುಂಧತಿ ಮಾಡಿದ ಭಾಷಣದ ಅಧಿಕೃತ ಪಠ್ಯವು ಕೆಳಕಂಡಂತಿದೆ: .. " , " " " , .... . ... , , . ಅವರ ಈ ಭಾಷಣ ಬಿಜೆಪಿ ಮುಖಂಡ ಅರುಣ್‌ ಜೇಟ್ಲಿಯವರಿಂದ ಕಟು ಟೀಕೆ ಎದುರಿಸಿತು. ಅರುಂಧತಿ ಭಾರತ ದೇಶದ ಒಕ್ಕೂಟ ವ್ಯವಸ್ಥೆ ವಿರುದ್ಧ ಪ್ರತ್ಯೇಕತಾ ಚಳವಳಿಯಲ್ಲಿ ನಿರತರಾಗಿದ್ದಾರೆ, ಕೇಂದ್ರ ಸರ್ಕಾರವು ಈ ವಿಚಾರ ಕುರಿತು ಏನನ್ನೂ ಮಾಡುತ್ತಿಲ್ಲ, ಅರುಂಧತಿ ಹಾಗೂ ಆ ಗೋಷ್ಠಿಯಲ್ಲಿ ಭಾಗವಹಿಸಿದವರ ವಿರುದ್ಧ ಕಾನೂನು ರೀತ್ಯ ದಂಡನೆಯ ಕ್ರಮ ಕೈಗೊಳ್ಳಬೇಕು ಎಂದು ಅರುಣ್‌ ಜೈಟ್ಲಿ ತಿಳಿಸಿದರು. ನವದೆಹಲಿಯಲ್ಲಿ ಅರುಂಧತಿ ನೀಡಿದ ಈ ರೀತಿಯ ಹೇಳಿಕೆಗಾಗಿ ಕೇಂದ್ರ ಸರ್ಕಾರವು ಅವರ ವಿರುದ್ಧ ಪ್ರತ್ಯೇಕತಾ ಮೊಕದ್ದಮೆ ಹೂಡಬಹುದು ಎಂಬ ವದಂತಿಗಳು ಕೇಳಿಬಂದವು. ಆದರೆ ಗೃಹ ಸಚಿವರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ; ಹಿಂಸಾಚಾರಕ್ಕೆ ಯಾವುದೇ ನೇರ ಪ್ರಚೋದನೆಯಿದ್ದಲ್ಲಿ ಮಾತ್ರ ಅರುಂಧತಿಯ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ' ಎಂದು ಭಾರತದ ಗೃಹಮಂತ್ರಿ ಪಿ ಚಿದಂಬರಮ್‌ ಹೇಳಿದರು. ಇಂಗ್ಲಿಷ್‌ ದೈನಿಕ ಡೈಲಿ ಪಯೊನಿಯರ್‌ನಲ್ಲಿ ಪ್ರಕಟವಾದ ಬಹಿರಂಗ ಪತ್ರವೊಂದರಲ್ಲಿ, 'ಅರುಂಧತಿಯ ಹೇಳಿಕೆಗಳು, ಭಾರತೀಯ ದಂಡ ಸಂಹಿತೆಯ ವಿಭಾಗ 124ಎ ಅಡಿ ರಾಷ್ಟ್ರ ದ್ರೋಹದ ಪ್ರತ್ಯೇಕತಾ ಆಪಾದನೆಗೆ ಒಳಗಾಗಬಹುದು; ಇದರಿಂದಾಗಿ ಶಾಸನಾತ್ಮಕವಾದ ಕಾನೂನಿನ ಸೂಕ್ತ ಕಲಮುಗಳಡಿ ಅರುಂಧತಿ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಉತ್ತರ ಪ್ರದೇಶದ ಐಪಿಎಸ್‌ ಅಧಿಕಾರಿ ಅಮಿತಾಭ್‌ ಠಾಕುರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2010ರ ಅಕ್ಟೋಬರ್‌ ತಿಂಗಳಲ್ಲಿ ನಡೆದ ಗೋಷ್ಠಿಯ ಕೆಲವು ದಿನಗಳ ಬಳಿಕ, ಅರುಂಧತಿ ಶ್ರೀನಗರ ಮತ್ತು ಷೋಪಿಯಾನ್‌ ನಗರಗಳಿಗೆ ಭೇಟಿ ನೀಡಿದರು. ನಂತರ ತಮ್ಮ ಭೇಟಿಗಳ ಬಗ್ಗೆ ಆರಂಭಿಕ ವರದಿ ನೀಡಿದರು. ಈ ಸಮಯದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷ ಬರಾಕ್‌ ಹುಸೇನ್‌ ಒಬಾಮಾರ ಭೇಟಿ ಆಗಷ್ಟೇ ನಡೆದಿತ್ತು ಎಂಬುದು ಗಮನಾರ್ಹ. ಅಮೆರಿಕಾ ದೇಶದ ರಾಷ್ಟ್ರಾಧ್ಯಕ್ಷರ ಹೇಳಿಕೆಗೆ ವಿಭಿನ್ನವಾದದ್ದನ್ನು ಅರುಂಧತಿ ಹೇಳಿದ್ದರು -ಒಬಾಮಾ ಅವರ ದ್ವಂದ್ವ ಹೇಳಿಕೆ ಬಗ್ಗೆ ವಿವರ ನೀಡಿ,ವಿವಾದಕ್ಕೊಳಗಾದರು. "2008ರಲ್ಲಿ ಅವರು ಚುನಾಯಿತರಾಗುವ ಒಂದು ವಾರ ಮುಂಚೆ... ಸ್ವಯಂ ಅಧಿಕಾರವೇ ಕಾಶ್ಮೀರದ ಹೋರಾಟದ ಕಾರಣ, ಭಾರತ ಮತ್ತು ಪಾಕಿಸ್ತಾನದ ನಡುವೆ 1947ರಿಂದಲೂ ಮೂರು ಯುದ್ಧಗಳು ನಡೆದಿದ್ದವು. ಇದರ ಚರ್ಚೆಯ ವಿಷಯವು ರಾಷ್ಟ್ರಾಧ್ಯಕ್ಷರ ಬಹುಮುಖ್ಯ ಕಾರ್ಯಗಳಲ್ಲೊಂದಾಗಿರುವುದು.. ಈ ಟಿಪ್ಪಣಿಗಳು ಭಾರತದಲ್ಲಿ ಬಹಳಷ್ಟು ಕಸಿವಿಸಿಗೆ ಕಾರಣವಾಗಿದ್ದವು" ಏಕೆಂದರೆ ರಾಷ್ಟ್ರಾಧ್ಯಕ್ಷರು ಆದಾಗಿಂದಲೂ ಕಾಶ್ಮೀರ ಕುರಿತು ಏನನ್ನೂ ಹೇಳಿರಲಿಲ್ಲ.' ಒಬಾಮಾ ಭಾರತ ಪ್ರವಾಸದಲ್ಲಿ, 'ಅಮೆರಿಕಾ ಸಂಯುಕ್ತ ಸಂಸ್ಥಾನವು ಕಾಶ್ಮೀರ ವಿಚಾರದೊಂದಿಗೆ ಇನ್ನಿತರ ವಿಷಯಗಳ ಬಗ್ಗೆ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ಹೇಳಿ ತಮ್ಮ ಅತಿಥೇಯರನ್ನು ಮೆಚ್ಚಿಸಿದರು ಎಂಬು ಅರುಂಧತಿ ಟಿಪ್ಪಣಿ ಮಾಡಿದರು. ತಮ್ಮದೇ ಕಾಶ್ಮೀರ ಪ್ರವಾಸದ ಕುರಿತು, ತಾವು ಷೋಪಿಯಾನ್ ನಗರ ತಲುಪುವ ಮುಂಚೆಯೇ, 2009ರ ಷೋಪಿಯಾನ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕಂಡಿದ್ದು ಕೇಳಿದ್ದ ವಿಚಾರದಲ್ಲಿ, 'ನನ್ನ ಹೇಳಿಕೆಯಿಂದಾಗಿ "ಸ್ವಲ್ಪ ಕಿರಿಕಿರಿ"ಯುಂಟಾಗಿದ್ದರೂ ಸಹ, ನಾನು ನವದೆಹಲಿಯಲ್ಲಿ ನೀಡಿದ ಹೇಳಿಕೆಯನ್ನು ವಿಷಾದಿಸಲು ಯಾವುದೇ ಪ್ರೇರಣೆಯಿರಲಿಲ್ಲ'. ಕಾಶ್ಮೀರದಿಂದ ಅರುಂಧತಿ ಮರಳಿದಾಗ, 'ಇಂದು ಸರ್ವೇಸಾಮಾನ್ಯವಾಗುತ್ತಿರುವ ರಾಜಕೀಯ ತಂತ್ರದಲ್ಲಿ, ಅಧಿಕಾರಿಗಳು ತಮ್ಮ ಅಸಮಾಧಾನವನ್ನು ಉದ್ರಿಕ್ತ ಗುಂಪುಗಳಿಗೆ ವರ್ಗಾಯಿಸುತ್ತಿದ್ದರು; ಬಿಜೆಪಿಯ ಮಹಿಳಾ ವಿಭಾಗವು ನನ್ನ ಮನೆಯ ಮುಂದೆ ಧರಣಿ ಕುಳಿತು, ನನ್ನ ಬಂಧನಕ್ಕಾಗಿ ಅಗ್ರಹಿಸಿದರು. ಕಿರುತೆರೆ ವಾಹನಗಳು ಈ ಘಟನೆಯ ನೇರಪ್ರಸಾರ ಮಾಡಲು ಸ್ಥಳಕ್ಕೆ ಆಗಮಿಸಿದ್ದವು. ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲೂ ಹೇಸುವುದಿಲ್ಲ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ನನ್ನ ವಿರುದ್ಧ ಮೊಕದ್ದಮೆ ಹೂಡಲಾಗುವುದೆಂದು, ಮಾರಕವೆನಿಸುವ ಅಭಿಪ್ರಾಯ ಹೊಂದಿರುವ ಬಜರಂಗದಳವು ಘೋಷಿಸಿದೆ.' 'ದಬಾವಣೆ ಮತ್ತು ಬೊಯಿಂಗ್‌ ವಿಮಾನಗಳ ಮೂಲಕ ಭಾರತ ವಿಜೃಂಭಿಸುವ ಕಲ್ಪನೆಯನ್ನು ಭಾರತದ ರಾಷ್ಟ್ರೀಯತಾವಾದಿಗಳು ಮತ್ತು ಸರ್ಕಾರ ನಂಬಿದಂತಿವೆ. ಆದರೆ ಬೆಚ್ಚನೆಯ, ಬೇಯಿಸಿದ ಮೊಟ್ಟೆಗಳಲ್ಲಿ ಅಡಗಿದ ವಿಧ್ವಂಸಕ ಶಕ್ತಿಯನ್ನು ಅವರೆಲ್ಲರೂ ಅರ್ಥ ಮಾಡಿಕೊಂಡಂತಿಲ್ಲ' ಎಂದು ಸ್ಥೂಲ ಟಿಪ್ಪಣಿಯೊಂದಿಗೆ ಅರುಂಧತಿ ತಮ್ಮ ವರದಿಯನ್ನು ಪೂರ್ಣಗೊಳಿಸಿದ್ದಾರೆ. ಹೊಸದೆಹಲಿಯಲ್ಲಿ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನವು ಒಬಾಮಾ ಕಾರ್ಯಕ್ರಮದ ಪಟ್ಟಿಯ ಸಿದ್ದತೆಯಲ್ಲಿದ್ದರೆ, ಇಲ್ಲಿ ತಮ್ಮ ಪ್ರಯತ್ನಕ್ಕಾಗಿ ಷೋಪಿಯಾನ್ ಪ್ರಕರಣದಿಂದ ಪೀಡಿತರಾದವರೊಬ್ಬರ ಪೋಷಕರಿಂದ ಅರುಂಧತಿಗೆ ಈ ಮೊಟ್ಟೆಗಳು ಉಡುಗೊರೆಯಾಗಿ ಸಂದಿದ್ದವು. === ಸರ್ದಾರ್‌ ಸರೋವರ್‌ ಯೋಜನೆ === ನರ್ಮದಾ ಅಣೆಕಟ್ಟು ಯೋಜನೆಯ ವಿರುದ್ಧದ ಹೋರಾಟದಲ್ಲಿ ಪರಿಸರೀಯ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಜೊತೆ ಅರುಂಧತಿ ಸಹಯೋಗ ನೀಡಿದರು. ಈ ಅಣೆಕಟ್ಟು ಸುಮಾರು ಅರ್ಧ ದಶಲಕ್ಷದಷ್ಟು ಜನರನ್ನು ಯಾವುದೇ ಪರಿಹಾರವಿಲ್ಲದೆ ನಿರಾಶ್ರಿತರನ್ನಾಗಿ ಮಾಡುತ್ತದೆ. ಇದಕ್ಕೆ ನೀಡುವ ಪರಿಹಾರ ಏನೂ ಇಲ್ಲ ಎನ್ನುವಷ್ಟು ತೀರಾ ಕಡಿಮೆ, ಜೊತೆಗೆ ನಿರೀಕ್ಷಿತ ಮಟ್ಟದಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ಇತರೆ ಸೌಲಭ್ಯಗಳನ್ನೂ ನೀಡದು. ಅರುಂಧತಿ ತಮ್ಮ ಬೂಕರ್‌ ಪ್ರಶಸ್ತಿಯ ಹಣ ಮತ್ತು ಸಂಭಾವನೆ ರಾಜಧನವನ್ನು ನರ್ಮದಾ ಬಚಾವೊ ಆಂದೋಲನಕ್ಕೆ ದಾನ ನೀಡಿದರು. 2002ರಲ್ಲಿ ಬಿಡುಗಡೆಯಾದ, ನರ್ಮದಾ ಯೋಜನೆ ಬಗ್ಗೆ ಫ್ರಾನಿ ಆರ್ಮ್‌ಸ್ಟ್ರಾಂಗ್‌ರ ಡ್ರೌನ್ಡ್‌ ಔಟ್‌ ಎಂಬ ಸಾಕ್ಷಚಿತ್ರದಲ್ಲಿ ಅರುಂಧತಿ ಕಾಣಿಸಿಕೊಂಡಿದ್ದಾರೆ. ನರ್ಮದಾ ಅಣೆಕಟ್ಟು ಯೋಜನೆಗೆ ಅರುಂಧತಿಯ ವಿರೋಧವನ್ನು ಗುಜರಾತ್‌ ರಾಜ್ಯಕ್ಕೆ ಕಳಂಕ ತರುವ ಯತ್ನವೆಂದು ಗುಜರಾತ್‌ ರಾಜ್ಯದ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದರು. . 2002ರಲ್ಲಿ, ಭಾರತೀಯ ಸರ್ವೋಚ್ಚ ನ್ಯಾಯಾಲಯವು ತಮಗೆ ನೀಡಿದ ನ್ಯಾಯಾಂಗ ನಿಂದನಾ ಮೊಕದ್ದಮೆಗೆ ಉತ್ತರದಲ್ಲಿ ಅರುಂಧತಿ ಒಂದು ಶಪಥಪತ್ರ(ಅಫಿಡವಿಟ್‌)ದಲ್ಲಿ 'ಸೇನಾ ಗುತ್ತಿಗೆ ಹಗರಣಗಳ ಆರೋಪದಲ್ಲಿ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಾಂಗವು, ಯಾವುದೋ ಸಡಿಲ ಆಧಾರದ ದೂರಿನ ಮೇರೆಗೆ ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದು ಎಂದರೆ, ನ್ಯಾಯನಿಂದನೆಯ ಗುಮ್ಮವನ್ನು ಬಳಸಿ ಟೀಕೆ ಮತ್ತು ಅಸಮಾಧಾನ ವ್ಯಕ್ತಪಡಿಸುವ ಹಕ್ಕನ್ನು ಹತ್ತಿಕುವ ಯತ್ನ' ಎಂದು ಪ್ರತಿಕ್ರಿಯಿಸಿದ್ದರು. ನ್ಯಾಯಾಲಯವು ಅರುಂಧತಿಯಿಂದ ಪಡೆದ, ಯಾವುದೇ ವಿಷಾದವಿಲ್ಲದ ಉತ್ತರವನ್ನು ಅಪರಾಧೀ ಪ್ರಮಾಣಕದ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ಒಂದು ದಿನದ 'ಸಾಂಕೇತಿಕ' ಕಾರಾವಾಸ ಮತ್ತು 2,500 ರೂಪಾಯಿಗಳ ದಂಡ ವಿಧಿಸಿತು. ಅರುಂಧತಿ ಕಾರಾವಾಸ ಮುಗಿಸಿ, ದಂಡ ಪಾವತಿಸದಿದ್ದಲ್ಲಿ ಇನ್ನೂ ಮೂರು ತಿಂಗಳುಗಳ ಕಾಲ ಕಾರಾವಾಸ ತಪ್ಪಿಸಲು, ದಂಡದ ಶುಲ್ಕ ಪಾವತಿಸಿದರು. ಪರಿಸರೀಯ ಇತಿಹಾಸಕಾರ ರಾಮಚಂದ್ರ ಗುಹ ಅರುಂಧತಿಯ ನರ್ಮದಾ ಆಂದೋಲನವನ್ನು ಟೀಕಿಸಿದ್ದಾರೆ. ಈ ಆಂದೋಲನಕ್ಕೆ ಅರುಂಧತಿಯ ಬದ್ಧತೆಯನ್ನು ಒಂದೆಡೆ ಪ್ರಶಂಸಿಸಿದರೂ, 'ಅವರ ಸಮರ್ಥನೆ ಅತಿರೇಕತೆ ಹಾಗೂ ವಿಷಯಲೋಲುಪತೆಯಿಂದ ಕೂಡಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. 'ಅರುಂಧತಿ ವಿಷಯಗಳೆಲ್ಲವನ್ನೂ ಉತ್ಪ್ರೇಕ್ಷೆ ಮಾಡುವ ಹಾಗೂ ಸರಳಗೊಳಿಸುವ, ಸೈತಾನನೊ ದೈವ ರೂಪದವನು ಎಂದು ಹೇಳುವ ಪ್ರವೃತ್ತಿ ಹೊಂದಿದ್ದಾರೆ. ಪ್ರಪಂಚದ ಬಗ್ಗೆ ಅವರ ದ್ವಂದ್ವ ಸೈದ್ಧಾಂತಿಕ ನಿಲುವು, ಅವರ ಜೋರು ಮಾತು-ಇವೆಲ್ಲವೂ ಸಹ ಪರಿಸರೀಯ ವಿಶ್ಲೇಷಣೆಗೆ ಕೆಟ್ಟ ಹೆಸರು ತಂದಿವೆ.' ನರ್ಮದಾ ಬಚಾವೊ ಆಂದೋಲನ್‌ ಸಂಘಟನೆಯು ಸಲ್ಲಿಸಿದ ಮನವಿಯ ಬಗ್ಗೆ ವಿಚಾರಣೆ ನಡೆಸಿ ಆಲಿಸುತ್ತಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅರುಂಧತಿಯ ಟೀಕೆಯು ಬಹಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಕೂಡಿದೆ ಎಂದು ರಾಮಚಂದ್ರ ಗುಹ ಅಭಿಪ್ರಾಯಪಟ್ಟಿದ್ದಾರೆ. ಅರುಂಧತಿ ಇದಕ್ಕೆ ಉತ್ತರವಾಗಿ, ತಾವು ಉದ್ದೇಶಪೂರ್ವಕವಾಗಿಯೇ ಭಾವೋದ್ರಿಕ್ತ ಮತ್ತು ಭಾವಾವಿಷ್ಠ ಶೈಲಿಯಲ್ಲಿ ಬರೆಯುವುದೆಂದು ಹೇಳಿದರು. 'ಹೌದು, ನಾನು ನಿಜಕ್ಕೂ ಭಾವೋದ್ರಿಕ್ತ,ಚಿತ್ತೋದ್ರೇಕ ವ್ಯಕ್ತಿ ಎಂದಿದ್ದಾರೆ. ನಾನು ಮನೆಮೇಲಿಂದ ಜೋರಾಗಿ ಕೂಗಿಕೊಳ್ಳುವಂತಹವಳು. ಆದರೆ ಅವನು ಮತ್ತು ಅವನ ಠಾಕು ಠೀಕಾದ ಸಣ್ಣ ಸಮುದಾಯದ ಕ್ಲಬ್..ಮಾತನಾಡುವುದೇ ಬೇಡ, 'ಶ್ಶ್‌! ಬಾಯಿ ಮುಚ್ಚು. ಅಕ್ಕ-ಪಕ್ಕದವರಿಗೆ ಎಚ್ಚರವಾಗುತ್ತೆ!' ಎಂಬುದನ್ನು ನಾನು ನಂಬುವುದಿಲ್ಲ ಎಂದು ಅವರು ಹೇಳಿದರು. ನಾನು ನೆರೆಹೊರೆಯವರನ್ನು ಎಬ್ಬಿಸಲೇಬೇಕು , ಅದು ನನ್ನ ಇಂಗಿತ. ಪ್ರತಿಯೊಬ್ಬರೂ ಕಣ್ತೆರೆದು ನೋಡಲಿ.' ಅರುಂಧತಿ ಹಾಗೂ ಗೇಯ್ಲ್‌ ಒಮ್ವರ್ಟ್‌ ಬಹಿರಂಗ ಪತ್ರಗಳ ಮೂಲಕ ನರ್ಮದಾ ಅಣೆಕಟ್ಟು-ವಿರೋಧಿ ಆಂದೋಲನ ಕುರಿತು ಗಹನ ಚರ್ಚೆಗಳನ್ನು ನಡೆಸಿದ್ದುಂಟು. ಅಣೆಕಟ್ಟು ನಿರ್ಮಾಣವನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಅರುಂಧತಿಯ ನಿಲುವು, ಹಾಗೂ, ಇತರೆ ಪರ್ಯಾಯಗಳನ್ನು ಹುಡುಕಬೇಕೆಂದು ಗೇಯ್ಲ್‌ ಒಮ್ವರ್ಟ್‌ ನಿಲುವು ತಾಳಿದ ಕಾರಣ ಇವರಿಬ್ಬರೂ ಪರಿಸರವಾದಿಗಳಲ್ಲಿ ಭಿನ್ನಮತವಿದ್ದರೂ, ಬಹುಮಟ್ಟಿಗೆ ಈ ಪತ್ರ ವ್ಯವಹಾರಗಳು ಟೀಕಾ-ಪ್ರಧಾನವಾಗಿದ್ದರೂ ರಚನಾತ್ಮಕವಾಗಿದ್ದವು. === ಅಮೆರಿಕಾ ಸಂಯುಕ್ತ ಸಂಸ್ಥಾನದ ವಿದೇಶ ನೀತಿ, ಅಫ್ಘಾನಿಸ್ಥಾನ ಯುದ್ಧ === ಆಗ 2001ರಲ್ಲಿ, ಬ್ರಿಟಿಷ್‌ ವಾರ್ತಾಪತ್ರಿಕೆ ದಿ ಗಾರ್ಡಿಯನ್ ‌ನಲ್ಲಿ ಪ್ರಕಟಿಸಲಾದ ಅಭಿಪ್ರಾಯ ಅಂಕಣದಲ್ಲಿ, ಅರುಂಧತಿ ರಾಯ್‌ ಅಫ್ಘಾನಿಸ್ಥಾನದ ಮೇಲೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಸೇನಾ ದಾಳಿಯ ಬಗ್ಗೆ ಅಭಿಪ್ರಾಯ ತಿಳಿಸಿದ್ದರು. 2001ರ ಸೆಪ್ಟೆಂಬರ್‌ 11ರಂದು ನ್ಯೂಯಾರ್ಕ್‌ ಮೇಲೆ ಆತಂಕವಾದಿ ದಾಳಿಗೆ ಸೇಡಿನ ಕ್ರಮ ಎಂಬ ವಾದವನ್ನು ಅರುಂಧತಿ ಒಪ್ಪಲಿಲ್ಲ. 'ಅಫ್ಘಾನಿಸ್ಥಾನದ ಮೇಲಿನ ಬಾಂಬ್‌ ದಾಳಿಯು ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ ಮೇಲಿನ ದಾಳಿಗಳಿಗೆ ಸೇಡಲ್ಲ. ಇದು ವಿಶ್ವದ ಜನತೆಯ ವಿರುದ್ಧ ಮತ್ತೊಂದು ಆತಂಕಕಾರಿ ಭಯೋತ್ಪಾದನಾ ಕೃತ್ಯ.' ಅರುಂಧತಿ ಹೇಳಿದಂತೆ, ಅಮೆರಿಕಾ ದೇಶದ ಅಂದಿನ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಮತ್ತು ಬ್ರಿಟನ್‌ನ ಅಂದಿನ ಪ್ರಧಾನಿ ಟೊನಿ ಬ್ಲೇರ್‌ ದೊಡ್ಡಣ್ಣನ ತರಹ ದ್ವಂದ್ವ ಯೋಚನೆಯವರಾಗಿದ್ದಾರೆ. 'ಅವರು ಅಫ್ಘಾನಿಸ್ಥಾನದ ಮೇಲೆ ವಾಯುಸೇನಾ ದಾಳಿ ಘೋಷಿಸಿದಾಗ, ವ್ಯತಿರಿಕ್ತವಾಗಿ ಅಮೆರಿಕಾ ರಾಷ್ಟ್ರಾಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್‌ ಹೇಳಿದ್ದು, 'ನಮ್ಮದು ಶಾಂತಿಯುತ ದೇಶ.' ಎಂದಿದ್ದಾರೆ. ಅಮೆರಿಕಾ ದೇಶದ ನೆಚ್ಚಿನ ರಾಯಭಾರಿ ಎನ್ನಲಾದ, ಅಸಲಿಗೆ ಯುನೈಟೆಡ್‌ ಕಿಂಗ್ಡಮ್‌ನ ಪ್ರಧಾನಿ ಟೋನಿ ಬ್ಲೇಯ್ರ್‌ ಬುಷ್‌ ಹೇಳಿಕೆಗೆ ದನಿಗೂಡಿಸಿದರು: 'ನಾವು ಶಾಂತಿಯುತ ಜನ.' ‌ಎಂದಿದ್ದನ್ನು ನೆನಪಿಸಿದ್ದಾರೆ. ಈಗ ನಮಗೆ ಸತ್ಯಾಂಶ ಏನೆಂದು ಗೊತ್ತು. ಹಂದಿಗಳು ಕುದುರೆಗಳಾಗಿವೆ. (ನಿಸ್ವಾರ್ಥಿಗಳು ಸ್ವಾರ್ಥಿಗಳಾಗಿದ್ದಾರೆ.) ಹುಡುಗಿಯರು ಹುಡುಗರಾಗಿದ್ದಾರೆ. (ಮೃದು ಸ್ವಭಾವ ಬಿಟ್ಟವರಾಗಿದ್ದಾರೆ.) ಯುದ್ಧವೀಗ ಶಾಂತಿಯಾಗಿದೆ." ಅಮೆರಿಕಾ ಸಂಯುಕ್ತ ಸಂಸ್ಥಾನವು ತಾನು ಶಾಂತಿಯುತ ಮತ್ತು ಸ್ವಾತಂತ್ರ್ಯ-ಪ್ರಿಯ ರಾಷ್ಟ್ರ ಎಂಬ ಹೇಳಿಕೆಯನ್ನು ಅರುಂಧತಿ ಒಪ್ಪಿಕೊಳ್ಳುವುದಿಲ್ಲ. ಅಮೆರಿಕಾ ದೇಶವು ಎರಡನೆಯ ವಿಶ್ವಸಮರದ ನಂತರ, ಚೀನಾ ಹಾಗೂ ಇನ್ನೂ ಹತ್ತೊಂಬತ್ತು ಇತರೆ ತೃತೀಯ ಪ್ರಪಂಚದ ದೇಶಗಳೊಂದಿಗೆ ಕದನ ನಡೆಸಿದ್ದುಂಟು ಅಥವಾ ಬಾಂಬ್ ದಾಳಿ ನಡೆಸಿದ್ದುಂಟು. ಅಮೆರಿಕಾ ಸಂಯುಕ್ತ ಸಂಸ್ಥಾನವು ಹಿಂದೆ ತಾಲಿಬಾನ್‌ ಉಗ್ರಗಾಮಿಗಳಿಗೆ ಬೆಂಬಲ-ಕುಮ್ಮಕ್ಕು ನೀಡಿದ್ದು, ಆನಂತರ ಇದೇ ತಾಲಿಬಾನ್ ವಿರುದ್ಧ ಉತ್ತರ ವಲಯದ ಮೈತ್ರಿಪಡೆಗೆ ಬೆಂಬಲ ನೀಡಿದ್ದುಂಟು. ಈ ಔತ್ತರೀಯ ಮೈತ್ರಿಪಡೆಯ 'ರೀತಿನೀತಿಗಳು ತಾಲಿಬಾನ್‌ಕ್ಕಿಂತಲೂ ಅಷ್ಟೇನೂ ವ್ಯತ್ಯಾಸವಿಲ್ಲದಿರುವುದು ಗೋಚರವಾಗುತ್ತದೆ'. ಅರುಂಧತಿ ತಾಲಿಬಾನ್‌ ವಿರುದ್ಧವೂ ಕಿಡಿಕಾರಿದ್ದರು: 'ಇಂದು, ಪ್ರೌಢರೂ ಹಾಗೂ ಆಳುವವರೆನಿಸಿದ, ತಾಲಿಬಾನ್‌ ಜನರು ಮಹಿಳೆಯರನ್ನು ಹೊಡೆಯುತ್ತಾರೆ, ಅವರ ಮೇಲೆ ಕಲ್ಲೆಸೆಯುತ್ತಾರೆ, ಅವರ ಮೇಲೆ ಅತ್ಯಾಚಾರವೆಸಗುತ್ತಾರೆ. ಮಹಿಳೆಯರ ಮೇಲೆ ಇನ್ನೇನು ಮಾಡುವುದು ಉಳಿದಿದೆ ಎಂಬುದು ತಾಲಿಬಾನ್‌ರಿಗೆ ಗೊತ್ತಿಲ್ಲ.' ಅಂತಿಮ ವಿಶ್ಲೇಷಣೆಯಲ್ಲಿ, ಅರುಂಧತಿ ಅಮೆರಿಕನ್‌-ಶೈಲಿಯ ಬಂಡವಾಳಶಾಹಿಯನ್ನು ದೂಷಿಸುತ್ತಾರೆ: 'ಅಮೆರಿಕಾ ದೇಶದಲ್ಲಿ, ಶಸ್ತ್ರಾಸ್ತ್ರ ಉದ್ದಿಮೆ, ತೈಲ, ಪ್ರಮುಖ ಮಾಧ್ಯಮ ಜಾಲಗಳು, ಜೊತೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ವಿದೇಶ ನೀತಿಗಳು - ಇವೆಲ್ಲಾ ಕ್ಷೇತ್ರಗಳಲ್ಲಿ ಒಂದೇ ರೀತಿಯ ವಾಣಿಜ್ಯ ಸಮೂಹಗಳ ಕೈವಾಡವಿದೆ.' ಅವರು ವಿಶ್ವ ವಾಣಿಜ್ಯ ಕೇಂದ್ರ ಹಾಗೂ ಅಫ್ಘಾನಿಸ್ಥಾನದ ಮೇಲಿನ ದಾಳಿಗಳನ್ನು ಒಂದೇ ನೈತಿಕ ದೃಷ್ಟಿಯಿಂದ ಕೂಡಿವೆ ಎಂದಿದ್ದಾರೆ- ಅಂದರೆ ಎರಡನ್ನೂ ಆತಂಕವಾದದ ದೃಷ್ಟಿಯಿಂದ ಅವರು ನೋಡಿದ್ದಾರೆ. 2001ರ ನಂತರ ಅದರ ಸೌಂದರ್ಯವನ್ನು ಕಲ್ಪಿಸುವುದೂ ಅಸಾಧ್ಯವೆಂದು ವಿಷಾದಿಸಿದರು. 'ಬಿಸಿಲಿನಲ್ಲಿ ನಿಧಾನಗತಿಯ, ಎಳೆ ಮರಿಯೊಂದು ಕಣ್ಣು ಬಿಡುವ ಮುಂಚೆಯೇ ನಡೆದಾಡಲು ಸಾಧ್ಯವೇ ಎಂದು ಅವರು ಅಚ್ಚರಿಸೂಚಿಸುತ್ತಾರೆ. ಹೀಗೆ ಕಣ್ಣುಮಿಟುಕಿಸುವ ಹಲ್ಲಿ ಅಥವಾ ಬಿಲ ಕೊರೆಯುವ ದಂಶಕವೊಂದು ಆಗಷ್ಟೇ ನಿಮ್ಮ ಕಿವಿಯಲ್ಲಿ ಪಿಸುಗುಟ್ಟಿದಾಗ, ವಿಶ್ವ ವಾಣಿಜ್ಯ ಕೇಂದ್ರ ಮತ್ತು ಅಫ್ಘಾನಿಸ್ಥಾನದ ಘಟನೆ ಬಗ್ಗೆ ಯೋಚಿಸದೇ ಅದಕ್ಕೆ ಪುನಃ ಪಿಸುಗುಟ್ಟಲು ಸಾಧ್ಯವೇ?' ಎಂದು ಅರುಂಧತಿ ಪ್ರಶ್ನಿಸಿದ್ದಾರೆ. 2003ರ ಮೇ ತಿಂಗಳಲ್ಲಿ, ನ್ಯೂಯಾರ್ಕ್‌ ನಗರದ ರಿವರ್ಸೈಡ್‌ ಚರ್ಚ್‌‌‌ನಲ್ಲಿ ಅರುಂಧತಿ 'ಇಂಸ್ಟೆಂಟ್‌-ಮಿಕ್ಸ್‌ ಇಂಪಿರಿಯಲ್‌ ಡೆಮೊಕ್ರಸಿ (ಬಯ್‌ ಒನ್‌, ಗೆಟ್‌ ಒನ್‌ ಫ್ರೀ)' ಎಂಬ ವಿಷಯದ ಬಗ್ಗೆ ಭಾಷಣ ನೀಡಿದರು. ಇದರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನವು ಎಲ್ಲೇಯಾದರೂ, ಎಂದಾದರೂ ತನ್ನ ಪ್ರಜೆಗಳ ಮೇಲೆ ಬಾಂಬ್ ದಾಳಿ ನಡೆಸುವ ಜನ್ಮಸಿದ್ಧ ಹಕ್ಕು ಹೊಂದಿರುವ ಜಾಗತಿಕ ಸಾಮ್ರಾಜ್ಯವೆನಿಸಿಕೊಂಡಿದೆ. ಇದರಿಂದಾಗಿ ದೇವರಿಂದಲೂ ಜನಸಂರಕ್ಷಣೆಯ ಈ ಹಕ್ಕನ್ನು ಕಿತ್ತುಕೊಂಡಿದೆ ಎಂದು ಅರುಂಧತಿ ವಿವರಿಸಿದರು. ಇರಾಕ್‌ ಮೇಲೆ ಅಮೆರಿಕಾದ ಪೂರ್ವ ನಿಯೋಜಿತ ದಾಳಿಯನ್ನು ಟೀಕಿಸಿದ ಭಾಷಣವಿದು. 2005ರ ಜೂನ್‌ ತಿಂಗಳಲ್ಲಿ, ಅವರು ಇರಾಕ್‌ ಬಗ್ಗೆ ವಿಶ್ವ ನ್ಯಾಯಮಂಡಳಿಯಲ್ಲಿ ಪಾಲ್ಗೊಂಡ ಸದಸ್ಯರಾಗಿದ್ದರು. ಆಗ 2006ರ ಮಾರ್ಚ್ ತಿಂಗಳಲ್ಲಿ ಅಮೆರಿಕಾ ರಾಷ್ಟ್ರಾಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಭಾರತಕ್ಕೆ ಭೇಟಿ ನೀಡಿದ್ದನ್ನು ಅರುಂಧತಿ ಟೀಕಿಸಿ, 'ಬುಷ್‌ ಒಬ್ಬ ಯುದ್ಧ ಅಪರಾಧಿ' ಎಂದು ಟೀಕಿಸಿದ್ದರು. === ಪರಮಾಣು ಶಸ್ತ್ರಾಸ್ತ್ರೀಕರಣ ಹೊಂದಿದ ಭಾರತ === ಭಾರತ 1998ರಲ್ಲಿ ರಾಜಸ್ಥಾನದ ಪೋಖರಾನ್‌ನಲ್ಲಿ ಯಶಸ್ವೀ ಪರಮಾಣು ಶಸ್ತ್ರ ಪರೀಕ್ಷೆ ನಡೆಸಿತು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಅರುಂಧತಿ ದಿ ಎಂಡ್‌ ಆಫ್‌ ಇಮ್ಯಾಜಿನೇಷನ್ ‌' ಬರೆದರು. ಇದರಲ್ಲಿ ಅವರು ಭಾರತ ಸರ್ಕಾರದ ಪರಮಾಣು ನೀತಿಗಳನ್ನು ಟೀಕಿಸಿದರು. ಅವರ ಸಂಕಲನ ದಿ ಕಾಸ್ಟ್‌ ಆಫ್ ಲಿವಿಂಗ್ ‌' ನಲ್ಲಿ ಇದನ್ನು ಪ್ರಕಟಿಸಲಾಯಿತು. ಇದರಲ್ಲಿ ಅರುಂಧತಿ ಭಾರತದ ಮಧ್ಯ ಹಾಗೂ ಪಶ್ಚಿಮ ಭಾಗದಲ್ಲಿರುವ ರಾಜ್ಯಗಳಾದ ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಪ್ರಮಾಣದ ಜಲವಿದ್ಯುತ್‌ ಯೋಜನೆಗಳನ್ನು ವಿರೋಧಿಸಿದರು. === ಇಸ್ರೇಲ್‌ ದೇಶದ ಟೀಕೆ === 2006ರ ಆಗಸ್ಟ್‌ ತಿಂಗಳಲ್ಲಿ, ಅರುಂಧತಿ ಮತ್ತು ನೋಮ್‌ ಚೊಮ್ಸ್ಕಿ, ಹೊವಾರ್ಡ್‌ ಝಿನ್‌ ಮತ್ತಿತರರು, ದಿ ಗಾರ್ಡಿಯನ್ ‌ ಪತ್ರಿಕೆಯಲ್ಲಿ ಪ್ರಕಟಿತ ಲೇಖನವೊಂದಕ್ಕೆ ಸಮ್ಮತಿ-ಸಹಿ ಹಾಕಿದರು. ಈ ಲೇಖನದಲ್ಲಿ 2006ರ ಲೆಬನಾನ್‌ ಯುದ್ಧವು ಯುದ್ಧ ಅಪರಾಧೀ ಕೃತ್ಯ ಎಂದು ಹೇಳಿ, ರಾಷ್ಟ್ರ-ಬೆಂಬಲಿತ ಆತಂಕವಾದದ ಆರೋಪವನ್ನು ಇಸ್ರೇಲ್ ವಿರುದ್ಧ ಮಾಡಲಾಗಿತ್ತು. 2007ರಲ್ಲಿ, ಕ್ವಿಯರ್ಸ್‌ ಅಂಡರ್ಮೈನಿಂಗ್‌ ಇಸ್ರೇಲಿ ಟೆರರಿಸಮ್‌ ಹಾಗೂ ನೈಋತ್ಯ ಏಷ್ಯನ್‌, ಉತ್ತರ ಆಫ್ರಿಕಾ ಕೊಲ್ಲಿ ವಲಯ ಕ್ವಿಯರ್ಸ್‌ ಮೊದಲು ಚಾಲನೆಗೊಳಿಸಿದ ಬಹಿರಂಗ ಪತ್ರವೊಂದಕ್ಕೆ ಸಹಿ ಹಾಕಿದ ನೂರಕ್ಕೂ ಹೆಚ್ಚು ಕಲಾವಿದರು ಮತ್ತು ಬರಹಗಾರರಲ್ಲಿ ಅರುಂಧತಿ ಸಹ ಒಬ್ಬರಾಗಿದ್ದರು. ಎಲ್‌ಜಿಬಿಟಿ ಚಲನಚಿತ್ರೋತ್ಸವಕ್ಕೆ ಇಸ್ರೇಲಿ ಪ್ರಾಯೋಜನವನ್ನು ಸ್ಥಗಿತಗೊಳಿಸಿ, ಹಾಗೂ, ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮವನ್ನು ಇಸ್ರೇಲಿ ದೂತಾವಾಸದೊಂದಿಗೆ ಸಹ-ಪ್ರಾಯೋಜಿಸದಿರುವ ಮೂಲಕ ಇಸ್ರೇಲಿ ರಾಜಕೀಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಅಂತರರಾಷ್ಟ್ರೀಯವಾಗಿ ಬಹಿಷ್ಕರಿಸಬೇಕು ಎಂದು ಸಾನ್‌ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ಎಲ್‌ಜಿಬಿಟಿ ಚಲನಚಿತ್ರೋತ್ಸವಕ್ಕೆ ಮನವಿ ಸಲ್ಲಿಸಲಾಯಿತು. === 2001ರ ಭಾರತೀಯ ಸಂಸತ್‌ ದಾಳಿ === 2001ರ ಡಿಸೆಂಬರ್‌ 13ರಂದು ಭಾರತೀಯ ಸಂಸತ್‌ ಭವನದ ಮೇಲೆ ಆತಂಕವಾದಿಗಳ ದಾಳಿಯ ತನಿಖೆ ಮತ್ತು ಆರೋಪಿಯ ವಿಚಾರಣೆಯ ಬಗ್ಗೆ ಅರುಂಧತಿ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಶ್ನೆಗಳ ವಿಚಾರವಾಗಿ ಸಂಸದೀಯ ತನಿಖೆ ನಡೆಸಿ ಮುಗಿಸುವ ವರೆಗೆ, ಪ್ರಮುಖ ಆರೋಪಿ ಮೊಹಮ್ಮದ್‌ ಅಫ್ಜಲ್‌ ವಿರುದ್ಧದ ಮರಣದಂಡಣ ತೀರ್ಪನ್ನು ಸ್ಥಗಿತಗೊಳಿಸಬೇಕೆಂದು ಕರೆ ನೀಡಿದರು. ಅಲ್ಲದೆ ಈ ವಿಚಾರಣೆಯ ಮಾಧ್ಯಮ ವರದಿಯನ್ನು ಟೀಕಿಸಿದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ಅರುಂಧತಿಯ ಹೇಳಿಕೆಯನ್ನು ಟೀಕಿಸಿ, ಒಬ್ಬ ಆತಂಕವಾದಿಯ ಪರ ನಿಲುವು ತಾಳುವುದು ರಾಷ್ಟ್ರೀಯ ಹಿತಾಸಕ್ತಿಗೆ ಬಹಳ ಮಾರಕ ಎಂದಿದೆ. === ಮುಥಾಂಗಾ ಘಟನೆ === 2003ರಲ್ಲಿ, ಕೇರಳದಲ್ಲಿ ಆದಿವಾಸಿ ಭೂ ಹಕ್ಕು ಪರ ಸಾಮಾಜಿಕ ಚಳವಳಿಯಾದ ಆದಿವಾಸಿ ಗೋತ್ರ ಮಹಾ ಸಭಾ ಸಂಘಟನೆಯು, ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಮುಧಾಂಗಾ ವನ್ಯಧಾಮದಲ್ಲಿ ಮುಂಚೆ ಇದ್ದ ನೀಲಗಿರಿ ತೋಟದ ಪ್ರದೇಶದಲ್ಲಿ ಕುಳಿತು ಧರಣಿ ನಡೆಸಿತು. 48 ದಿನಗಳ ನಂತರ, ಅಲ್ಲಿನ ಹಿಡುವಳಿದಾರರನ್ನು ಮತ್ತು ಉಳಿದುಕೊಂಡವರನ್ನು, ಹೊರಹಾಕಲು,ಓಡಿಸಲು ಪೊಲೀಸ್‌ ಪಡೆಯನ್ನು ಕಳುಹಿಸಲಾಯಿತು. ಒಬ್ಬ ಪ್ರತಿಭಟನಾಕಾರ ಮತ್ತು ಒಬ್ಬ ಪೊಲೀಸ್‌ ಸಿಬ್ಬಂದಿ ಈ ಘಟನೆಯಲ್ಲಿ ಮೃತರಾದರು. ಈ ಚಳವಳಿಯ ಮುಂಚೂಣಿಯಲ್ಲಿದ್ದವರನ್ನು ಬಂಧಿಸಲಾಯಿತು. ಅರುಂಧತಿ ಆ ಪ್ರದೇಶಕ್ಕೆ ಭೇಟಿ ನೀಡಿ, ಸೆರೆಮನೆಯಲ್ಲಿದ್ದ ಆ ಚಳವಳಿಯ ಮುಖಂಡರನ್ನು ಭೇಟಿಯಾದರು. ನಂತರ, ಕೇರಳದ ಅಂದಿನ ಮುಖ್ಯಮಂತ್ರಿ ಹಾಗೂ ಭಾರತ ಸರ್ಕಾರದಲ್ಲಿ ಇಂದಿನ ರಕ್ಷಣಾ ಮಂತ್ರಿ ಎ ಕೆ ಆಂಟೊನಿಯವರಿಗೆ ಒಂದು ಬಹಿರಂಗ ಪತ್ರ ಬರೆದರು -ಅದರಲ್ಲಿ 'ನಿಮ್ಮ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ!' ಎಂದು ಹೇಳಲಾಗಿತ್ತು. === 2008 ಮುಂಬಯಿ ದಾಳಿಗಳ ಬಗ್ಗೆ ಅಭಿಪ್ರಾಯಗಳು === ಆಗ 2008ರ ನವೆಂಬರ್‌ 26ರಂದು ಮುಂಬಯಿ ನಗರದ ಮೇಲೆ ನಡೆದ ಆತಂಕವಾದಿ ದಾಳಿಯನ್ನು ಪ್ರತ್ಯೇಕವಾಗಿ ನೋಡಬಾರದು. ಬದಲಿಗೆ, ಪ್ರಾದೇಶಿಕ ಐತಿಹಾಸಿಕತೆಯಲ್ಲಿನ ಸಡಿಲುತನ ಮತ್ತು ವ್ಯಾಪಕ ಬಡತನದಲ್ಲಿರುವ ಸಮುದಾಯ, ಹಾಗೂ ಭಾರತದ ವಿಭಜನೆ (ಅರುಂಧತಿ ಪ್ರಕಾರ ಇದು ಬ್ರಿಟಿಷರು ಭಾರತದ ಉದರಕ್ಕೆ ನೀಡಿದ ಅಂತಿಮವಾದ, ಬಲವಾದ ಒದೆತ), 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮುಗಲಭೆಯ ಸಮಯದಲ್ಲಿ ನಡೆದ ಅತ್ಯಾಚಾರ ಹಾಗೂ ಇಂದಿಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಘರ್ಷಣೆ ಇವೆಲ್ಲವನ್ನೂ ಪರಿಗಣಿಸಿ ನೋಡಬೇಕಿದೆ ಎಂದು 2008ರ ಡಿಸೆಂಬರ್‌ 13ರ ದಿ ಗಾರ್ಡಿಯನ್‌ ಪತ್ರಿಕೆಗಾಗಿ ತಮ್ಮ ಅಭಿಪ್ರಾಯ ಅಂಕಣದಲ್ಲಿ, ಅರುಂಧತಿ ವಾದಿಸಿದರು. ಸಾಂದರ್ಭಿಕ ಅಭಿಪ್ರಾಯದ ಕೂಗುಗಳು ಕೇಳಿಬಂದರೂ, 'ಆತಂಕವಾದವನ್ನು ಯಾವುದೂ, ಏನೂ ಸಮರ್ಥಿಸಲಾರದು' ಎಂದು ಅರುಂಧತಿ ಸ್ಪಷ್ಟವಾಗಿ ಹೇಳಿದ್ದರು. ಅವರು ಆತಂಕವಾದವನ್ನು 'ಹೃದಯವಿಲ್ಲದ ಸಿದ್ದಾಂತ' ಎಂದು ಜರಿದಿದ್ದರು. ಪಾಕಿಸ್ತಾನದೊಂದಿಗೆ ಯುದ್ಧದ ಪ್ರಸ್ತಾಪವನ್ನು ಅರುಂಧತಿ ವಿರೋಧಿಸಿದರು. 'ಆತಂಕವಾದಿ ದಾಳಿಯ ಮೂಲಸ್ಥಾನವನ್ನು ಗುರುತಿಸಿ ಹಿಡಿದು, ಅದೇ ದೇಶದ ಗಡಿಯೊಳಗೇ ಪ್ರತ್ಯೇಕಿಸಿಡಲು ಅಸಾಧ್ಯ'. ಒಂದು ವೇಳೆ ಯುದ್ಧ ಸಂಭವಿಸಿದಲ್ಲಿ ಇಡೀ ದಕ್ಷಿಣ ಏಷ್ಯಾ ವಲಯವು ಅರಾಜಕತೆಯ ಪ್ರಪಾತಕ್ಕೆ ಬೀಳಬಹುದು'. ಸಲ್ಮಾನ್‌ ರಷ್ದಿ ಮತ್ತು ಇತರರು ಅರುಂಧತಿಯ ಅಭಿಪ್ರಾಯವನ್ನು ಕಟುವಾಗಿ ಟೀಕಿಸಿದರು. ಮುಂಬಯಿಯ ಆತಂಕವಾದಿ ಭಯೋತ್ಪಾದನೆ ಹಾಗೂ ಕಾಶ್ಮೀರ ಹಾಗೂ ಭಾರತದಲ್ಲಿ ಮುಸಲ್ಮಾನರ ಮೇಲೆ ಆರ್ಥಿಕ ದಬ್ಬಾಳಿಕೆಗಳಿಗೆ ಹೋಲಿಸಿದ್ದಕ್ಕೆ ಅರುಂಧತಿಯನ್ನು ಖಂಡಿಸಿದರು. ಇದರಲ್ಲೂ ವಿಶಿಷ್ಟವಾಗಿ ರಷ್ದಿ ಅವರು ತಾಜಮಹಲ್‌ ಪ್ಯಾಲೆಸ್‌ & ಟವರ್‌ನ ಪ್ರತಿಷ್ಠಿತ ಸ್ಥಾನವನ್ನು ಹಗುರವಾಗಿ ಪರಿಗಣಿಸಿದ್ದಕ್ಕೆ ಅರುಂಧತಿ ಮೇಲೆ ಟೀಕಾ ಪ್ರಹಾರ ನಡೆಸಿದರು. ಭಾರತದ ಬರಹಗಾರ್ತಿ ತವ್ಲೀನ್‌ ಸಿಂಗ್, ಅರುಂಧತಿಯ ಹೇಳಿಕೆಯನ್ನು 'ಭಾರತ ಹಾಗೂ ಭಾರತೀಯತೆಗೆ ಸಂಬಂಧಿತ ಪ್ರತಿಯೊಂದರ ವಿರುದ್ಧ ಹುಚ್ಚುಹುಚ್ಚಾದ, ಭ್ರಮಾಧೀನ ಮಾತುಗಳ ಸರಣಿ'‌ ಎಂದು ಲೇವಡಿ ಮಾಡಿದ್ದಾರೆ. === ಶ್ರೀಲಂಕಾ ವಿರುದ್ಧ ಟೀಕೆ === 2009ರ ಏಪ್ರಿಲ್‌ 1ರಂದು, ಪುನಃ, ದಿ ಗಾರ್ಡಿಯನ್‌ ಪತ್ರಿಕೆಯ ಅಭಿಪ್ರಾಯಸೂಚಿ ಅಂಕಣವೊಂದರಲ್ಲಿ, ಅರುಂಧತಿ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಆ ದೇಶದ ಸರ್ಕಾರ ನಡೆಸುತ್ತಿದ್ದ ಸಾಮೂಹಿಕ ಹತ್ಯೆಗಳತ್ತ ಅಂತರರಾಷ್ಟ್ರೀಯ ಸಮುದಾಯಗಳ ಗಮನ ನೀಡಬೇಕೆಂದು ಮನವಿ ಮಾಡಿದ್ದರು. ತಮಿಳರನ್ನು ತುಂಬಿ ತುಳುಕಿಸುತ್ತಿದ್ದ ಶಿಬಿರಗಳ ವರದಿಗಳನ್ನು ಉಲ್ಲೇಖಿಸಿದರು. 'ಯಾವುದೇ ಲಂಗುಲಗಾಮಿಲ್ಲದ, ನಿರ್ಲಜ್ಜೆಯಿಂದ ಕೂಡಿದ ಜನಾಂಗೀಯ ಯುದ್ಧವಿದು' ಎಂದು ಅವರು ವಿವರಿಸಿದರು. ಶ್ರೀಲಂಕಾ ಸರ್ಕಾರವು ಸಾಮೂಹಿಕ ಹತ್ಯೆ ಎನ್ನಬಹುದಾದ ಕೃತ್ಯವನ್ನೆಸಗುವುದಕ್ಕೆ ಅತ್ಯಂತ ನಿಕಟವಾಗಿದೆ. ತಮಿಳು ನಾಗರಿಕರನ್ನು ಕಲೆಹಾಕಿದ್ದ ಶ್ರೀಲಂಕಾದ ಐಡಿಪಿ ಶಿಬಿರಗಳನ್ನು 'ಸೆರೆ ಶಿಬಿರಗಳು' ಎಂದು ಅವರು ಬಣ್ಣಿಸಿದ್ದರು. ಶ್ರೀಲಂಕಾ ಮೂಲದ ಬರಹಗಾರ ರುವಾನಿ ಫ್ರೀಮನ್‌ ಅರುಂಧತಿಯ ಅಭಿಪ್ರಾಯಗಳನ್ನು 'ಯಾವುದೇ ಆಧಾರವಿಲ್ಲದ್ದು ಮತ್ತು ಆಷಾಢಭೂತಿತನದಿಂದ ಕೂಡಿದೆ' ಎಂದು ಹೇಳಿ, ಅರುಂಧತಿ ಎಲ್‌ಟಿಟಿಯ ಘೋರ ಅತ್ಯಾಚಾರಗಳನ್ನು ತಮ್ಮ ಅನುಕೂಲಕ್ಕನುಗುಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಅರುಂಧತಿ ಇಂತಹ ಟೀಕೆಗಳಿಗೆ ಪ್ರತಿಕ್ರಿಯಿಸಿ, 'ಇತರೆ ಎಲ್ಲರನ್ನು ಹೊರತುಪಡಿಸಿ, ಕೇವಲ ತಮ್ಮ ಜನಾಂಗಕ್ಕಾಗಿ ಮಾತ್ರ ನ್ಯಾಯವನ್ನು ತಮ್ಮ ದೃಷ್ಟಿಯಲ್ಲಿಡುವವರನ್ನು ನಾನು ಪ್ರಶಂಸಿಸಲಾರೆ. ಆದರೂ ಹಲವು ದಶಕಗಳ ಕಾಲ ಶ್ರೀಲಂಕಾ ಸರ್ಕಾರ ಹಾಗೂ ಬಹುಮಟ್ಟಿಗೆ ಸಿಂಹಳೀಯ ಬಹುಸಂಖ್ಯಾತರು ತಮಿಳು ಜನರ ವಿರುದ್ಧ ನಡೆಸಿದ ಘೋರ, ಭೀಕರ, ಜನಾಂಗೀಯತೆಯ, ಅನ್ಯಾಯದ ಹಿಂಸಾಚಾರಗಳಿಗೆ ಹೋಲಿಸಿದರೆ, ಹಿಂಸಾ ಸಂಸ್ಕೃತಿ ಅಳವಡಿಸಿಕೊಂಡಿದ್ದ ಎಲ್‌ಟಿಟಿಯ ಕೃತ್ಯಗಳು ನಗಣ್ಯ' ಎಂದರು. === ಅರಣ್ಯ ನಿಯಮಾವಳಿಗಳ ಉಲ್ಲಂಘನೆ === ದಿ ಟೆಲಿಗ್ರಾಫ್‌ ಪತ್ರಿಕಾ ವರದಿಯ ಪ್ರಕಾರ, 2003ರಲ್ಲಿ ಪಂಚಮಢಿ ಸನಿಹ ಅರುಂಧತಿ ಮತ್ತು ಅವರ ಪತಿ ನಿರ್ಮಿಸಿದ ಬೆಟ್ಟದ ಮೇಲಿನ ಬಂಗಲೆಯು ಗುರುತಿಸಲಾದ ವನ್ಯ ಪ್ರದೇಶದಲ್ಲಿದ್ದು, ಅರಣ್ಯ ಇಲಾಖೆಯ ನಿಯಮಾವಳಿಗಳ ಉಲ್ಲಂಘನೆಯಾಗಿರುವ ಕಾರಣ, ಅದನ್ನು ನೆಲಸಮಗೊಳಿಸಬೇಕಾಗುತ್ತದೆ' ಎಂದು ಪಂಚಮಢಿ ಜಿಲ್ಲೆಯ ಆಡಳಿತ ಮಂಡಳಿ ತಿಳಿಸಿತ್ತು. ಈ ಕಾನೂನು ಉಲ್ಲಂಘನೆ ಪ್ರಕರಣದಡಿ ಭಾರತೀಯ ಕಾದಂಬರಿಕಾರ ವಿಕ್ರಮ್‌ ಸೇಠ್‌ರ ಸಹೋದರಿ ಹಾಗೂ ಇಬ್ಬರು ಅರಣ್ಯ ಇಲಾಖೆಯ ಸಿಬ್ಬಂದಿಯನ್ನೂ ಸೇರಿಸಲಾಯಿತು. ಅರುಂಧತಿಯ ಪತಿ ಈ 4,346 (403.8 m2) ಸ್ವತ್ತನ್ನು 1994ರಲ್ಲಿ ಕೊಂಡಿದ್ದರು. ಮಧ್ಯಪ್ರದೇಶದಲ್ಲಿರುವ ಈ ಅರಣ್ಯ ಪ್ರದೇಶವು ರಕ್ಷಿತಾರಣ್ಯ ವಲಯದ ಮೇಲೆ ಒತ್ತುವರಿಯಾಗಿತ್ತು. === ನಕ್ಸಲರ ಬಗೆಗಿನ ಅಭಿಪ್ರಾಯಗಳು === ಭಾರತದಲ್ಲಿ ನಕ್ಸಲೀಯ-ಮಾವೋವಾದಿ ಬಂಡುಕೋರರ ವಿರುದ್ಧ ಸರ್ಕಾರ ನಡೆಸುತ್ತಿರುವ ಸಶಸ್ತ್ರ ಕಾರ್ಯಾಚರಣೆಗಳನ್ನು ಅರುಂಧತಿ ಟೀಕಿಸಿದ್ದಾರೆ. ಇದನ್ನು 'ದೇಶದ ಅತಿ-ಬಡಜನರ ವಿರುದ್ಧದ ಯುದ್ಧ' ಎಂದಿದ್ದಾರೆ. ಅವರ ಪ್ರಕಾರ, (ಬಹುರಾಷ್ಟ್ರೀಯ) ಸಂಸ್ಥೆಗಳೊಂದಿಗೆ ಪರಸ್ಪರ ಒಪ್ಪಿಗೆ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಿದ ಸರ್ಕಾರವು, ಈ ವಾಣಿಜ್ಯ ಉದ್ದಿಮೆಗಳಿಗೆ ಅನುಕೂಲವಾಗಲೆಂದು, 'ಜನತೆಯತ್ತ ಇರುವ ಅಗತ್ಯವಾದ ತಮ್ಮ ಹೊಣೆಯನ್ನು ತ್ಯಜಿಸಿ' ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಗೊಳಿಸಿದೆ'. ತಮ್ಮ ಅಭಿಪ್ರಾಯಗಳಿಗೆ ಅರುಂಧತಿ ವಿವಿಧ ಮೂಲಗಳಿಂದ ಸಮರ್ಥನೆ ದೊರಕಿದರೂ, ಮಾವೊವಾದಿಗಳನ್ನು ಗಾಂಧಿವಾದಿಗಳು ಎಂದು ಬಣ್ಣಿಸಿದ್ದದ್ದು ವಿವಾದಕ್ಕೆ ಕಾರಣವಾಗಿದೆ. ಇತರೆ ಹೇಳಿಕೆಗಳಲ್ಲಿ, 'ಒಂದೆಡೆ, ನಕ್ಸಲೀಯರೆಲ್ಲರೂ ಒಂದು ರೀತಿಯ ದೇಶಭಕ್ತರಾಗಿ ಸಂವಿಧಾನದ ಸೂತ್ರಗಳನ್ನು ಪಾಲಿಸುತ್ತಿದ್ದರೆ, ಇನ್ನೊಂದೆಡೆ ಸರ್ಕಾರವು ಸಂವಿಧಾನವನ್ನು ಒಂದಲ್ಲ ಒಂದು ರೀತಿಯಲ್ಲಿ ಉಲ್ಲಂಘಿಸುತ್ತಿದೆ' ಎಂದು ಹೇಳಿದರು. ಮಾವೋಗಳ ಆತಂಕವಾದೀ ಕೃತ್ಯಗಳಿಗೆ ಗುರಿಯಾದವರ ಬಗ್ಗೆ ಅರುಂಧತಿಯಲ್ಲಿ ಯಾವುದೇ ಅನುಕಂಪವಿಲ್ಲ ಎಂದು ಹಲವು ಟಿಪ್ಪಣಿಕಾರರು ಗಮನಿಸಿದ್ದಾರೆ. ಸಿಎನ್‌ಎನ್‌-ಐಬಿಎನ್ ಕಿರುತೆರೆ ವಾಹಿನಿಯಲ್ಲಿ ಪ್ರಸಾರಗೊಂಡ, ಕರಣ್‌ ಥಾಪರ್‌ರೊಂದಿಗಿನ ಸಂದರ್ಶನವೊಂದರಲ್ಲಿ ಅರುಂಧತಿ, 'ಭಾರತೀಯ ರಾಷ್ಟ್ರವನ್ನು ತಮ್ಮದಾಗಿಸಿಕೊಂಡಿರುವ ಈ ಸರ್ವಾಧಿಕಾರದ ವರ್ಗವನ್ನು ಉರಳಿಸುವುದು ಮಾವೋವಾದಿಯ ಪರಮೋಚ್ಚ ಗುರಿ' ಎಂದು ನಕ್ಸಲರ ಧ್ಯೇಯವನ್ನು ವ್ಯಾಖ್ಯಾನಿಸಿದರು. ಕೇವಲ ಬಂಡವಾಳಶಾಹಿ ಅಥವಾ ಕಮ್ಯೂನಿಸ್ಟ್‌ ಸಿದ್ಧಾಂತಗಳಿಂದ ವಿಶ್ವದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದೆಂದು ನಂಬದ ಕಾರಣ, ತಾವು ಮಾವೋವಾದಿಗಳ ಈ ಗುರಿಯನ್ನು ಸಮರ್ಥಿಸುವುದಿಲ್ಲ ಎಂದರು. ಮಾವೋವಾದಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಗೊಳಿಸಬೇಕೆಂದು ಪದೇ-ಪದೇ ಕೇಳಲಾಯಿತು. ಕರಣ್‌ ಥಾಪರ್‌: ನೀವು ಮಾವೋವಾದಿಗಳನ್ನು ಯಾವ ದೃಷ್ಟಿಯಿಂದ ಕಾಣುವಿರಿ? ಅರುಂಧತಿ ರಾಯ್‌: ಈಗ ಚಾಲ್ತಿಯಲ್ಲಿರುವ ಹಲವು ವಿರೋಧೀ ಚಳವಳಿಗಳ ಬೃಹತ್‌ ಪ್ರಮಾಣದ ಸನ್ನಿವೇಶದಲ್ಲಿ, ಮಾವೋವಾದಿಗಳು ಅತಿ ಉಗ್ರಗಾಮಿ ಕ್ಷೇತ್ರದಲ್ಲಿರುವ ಜನರ ಗುಂಪು. ಕರಣ್‌ ಥಾಪರ್‌: ಆದರೆ, ಭಾರತೀರ ರಾಷ್ಟ್ರ ಮತ್ತು ಸಂವಿಧಾನವನ್ನು ಉರುಳಿಸುವ ಯಾವುದೇ ಯತ್ನವನ್ನು ನೀವು ಸಮರ್ಥಿಸುತ್ತೀರೇನು? ಅರುಂಧತಿ ರಾಯ್‌: ... ಒಂದು ವೇಳೆ, ಭಾರತೀಯ ರಾಷ್ಟ್ರ ಮತ್ತು ಸಂವಿಧಾನವನ್ನು ಉರುಳಿಸಲು ಯತ್ನಿಸುವ ಮಾವೋವಾದಿಗಳನ್ನು ನಾನು ಬೆಂಬಲಿಸುತ್ತೇನೆ ಎಂದಲ್ಲಿ ನಾನೂ ಸಹ ಒಬ್ಬ ಮಾವೋವಾದಿ ಎಂದಂತೆ. ಆದರೆ ನಾನು ಮಾವೋವಾದಿಯಲ್ಲ. ಕರಣ್‌ ಥಾಪರ್‌: .. ಆದರೆ ಮಾವೋವಾದಿಗಳು ಬಳಸುವ ತಂತ್ರಗಳ ಬಗ್ಗೆ ನೀವೇನು ಹೇಳುತ್ತೀರಿ?.. ಅರುಂಧತಿ ರಾಯ್‌: ಈಗಾಗಲೇ ಆಂತರಿಕ ಯುದ್ಧ ನಡೆಯುತ್ತಿದೆ... ನಿಮ್ಮ ಹಳ್ಳಿಯ ಸುತ್ತ 800 ಜನ ಸಿಆರ್‌ಪಿಎಫ್‌ ಸೈನಿಕರಿದ್ದು, ಅತ್ಯಾಚಾರ, ಆಸ್ತಿಪಾಸ್ತಿ ಹಾಳು ಮಾಡಿ, ದೋಚಿಕೊಂಡು ಹೋಗುತ್ತಿದ್ದರೆ, ನಾನು ನಿರಾಹಾರ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಲಾಗದು. ಜನರು ಇದನ್ನು ತಡೆಗಟ್ಟುವ ಹಕ್ಕನ್ನು ನಾನು ಸಮರ್ಥಿಸುತ್ತೇನೆ. == ಪ್ರಶಸ್ತಿಗಳು == 'ದಿ ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್‌' ಎಂಬ ತಮ್ಮ ಕಾದಂಬರಿಗಾಗಿ ಅರುಂಧತಿ ರಾಯ್‌ಗೆ 1997ರಲ್ಲಿ ಬೂಕರ್‌ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯಲ್ಲಿ 30,000 ಅಮೆರಿಕನ್‌ ಡಾಲರ್‌ಗಳು ಹಾಗೂ 'ಈ ಪುಸ್ತಕವು ತಾನು ನೀಡಿದ ಭರವಸೆಗಳನ್ನೆಲ್ಲಾ ಈಡೇರಿಸಿದೆ' ಎಂಬ ಪ್ರಶಸ್ತಿ ಭಿನ್ನವತ್ತಳೆ ಸೇರಿದ್ದವು. ಇದಕ್ಕೂ ಮುಂಚೆ, 1989ರಲ್ಲಿ ಇನ್‌ ವಿಚ್‌ ಆನೀ ಗಿವ್ಸ್ ಇಟ್‌ ದೋಸ್‌ ಒನ್ಸ್ ‌ ಎಂಬ ಚಲನಚಿತ್ರಕ್ಕಾಗಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿತು. ವಿಶ್ವದ ಅತಿ ಪ್ರಬಲ ಸರ್ಕಾರಗಳು ಮತ್ತು (ಉದ್ದಿಮೆ) ಸಂಸ್ಥೆಗಳಿಂದ ತೊಂದರೆಗೊಳಗಾದ ನಾಗರಿಕ ಸಮುದಾಯಗಳ ಕ್ಷೇತ್ರದಲ್ಲಿ ಅವರ ಸೇವೆಗಾಗಿ ಹಾಗೂ, ಸ್ವಾತಂತ್ರ್ಯ, ನ್ಯಾಯ ಮತ್ತು ಸಾಂಸ್ಕೃತಿಕ ವಿವಿಧತೆಗಾಗಿ ಹೋರಾಟದಲ್ಲಿ ಅವರ ಜೀವನ ಮತ್ತು ಸೇವೆಯನ್ನು 2002ರಲ್ಲಿ ಗುರುತಿಸಿದ ಲಾನಾನ್‌ ಫೌಂಡೇಷನ್‌ ಅರುಂಧತಿಗೆ ಸಾಂಸ್ಕೃತಿಕ ಸ್ವಾತಂತ್ರ್ಯ ಪ್ರಶಸ್ತಿ ನೀಡಿತು. ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯ ಕೊಡುಗೆ ಹಾಗೂ ಅಹಿಂಸೆಯ ಸಮರ್ಥಿಸಿಕೊಂಡಿದ್ದಕ್ಕಾಗಿ ಅರುಂಧತಿಗೆ 2004ರ ಮೇ ತಿಂಗಳಲ್ಲಿ ಸಿಡ್ನಿ ಶಾಂತಿ ಪ್ರಶಸ್ತಿ ಲಭಿಸಿತು. ಸಮಕಾಲೀನ ವಿಚಾರಗಳ ಬಗ್ಗೆ ದಿ ಅಲ್ಜಿಬ್ರಾ ಆಫ್‌ ಇನ್ಫೈನೈಟ್ ಜಸ್ಟಿಸ್ ಎಂಬ‌ ಪ್ರಬಂಧಗಳ ಸಂಗ್ರಹಕ್ಕಾಗಿ 2006ರ ಜನವರಿ ತಿಂಗಳಲ್ಲಿ ಅರುಂಧತಿಗೆ ಭಾರತೀಯ ಅಕ್ಷರ ಅಕಾಡೆಮಿಯ ವತಿಯಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಆದರೆ, ಭಾರತ ಸರ್ಕಾರವು ಅಮೆರಿಕಾ ಸಂಯುಕ್ತ ಸಂಸ್ಥಾನದ ತಾಳಕ್ಕೆ ಕುಣಿದು, ಕೈಗಾರಿಕಾ ಕಾರ್ಮಿಕರ ವಿರುದ್ಧ ದಬ್ಬಾಳಿಕೆಯ ನೀತಿ ಅನುರಿಸರಿಸಿದ ಭಾರತೀಯ ಸರ್ಕಾರ, ಹೆಚ್ಚುತ್ತಿರುವ ಸೈನ್ಯೀಕರಣ ಹಾಗೂ ಆರ್ಥಿಕ ನವ-ಸುಧಾರೀಕರಣದ ವಿರುದ್ಧ ಪ್ರತಿಭಟಿಸಿದ ಅರುಂಧತಿ, ಈ ಪ್ರಶಸ್ತಿಯನ್ನು ನಿರಾಕರಿಸಿದರು. == ಕೃತಿಗಳು == === ಪುಸ್ತಕಗಳು === ದಿ ಗಾಡ್‌ ಆಫ್‌ ಸ್ಮಾಲ್‌ ಥಿಂಗ್ಸ್‌ . ಫ್ಲಮಿಂಗೊ, 1997. 0-00-655068-1. ದಿ ಎಂಡ್‌ ಆಫ್‌ ಇಮ್ಯಾಜಿನೇಷನ್‌ . ಕೊಟ್ಟಯಮ್‌: ಡಿ.ಸಿ. ಬುಕ್ಸ್‌, 1998. 81-7130-867-8. ದಿ ಕಾಸ್ಟ್‌ ಆಫ್‌ ಲಿವಿಂಗ್‌ . ಫ್ಲಮಿಂಗೊ, 1999. 0-375-75614-0. 'ದಿ ಗ್ರೇಟರ್‌ ಕಾಮನ್‌ ಗುಡ್'‌ ಮತ್ತು 'ದಿ ಎಂಡ್‌ ಆಫ್‌ ಇಮ್ಯಾಜಿನೇಷನ್'‌ ಎಂಬ ಪ್ರಬಂಧಗಳನ್ನು ಒಳಗೊಂಡಿದೆ. ದಿ ಗ್ರೇಟರ್‌ ಕಾಮನ್‌ ಗುಡ್‌ . ಮುಂಬಯಿ: ಇಂಡಿಯಾ ಬುಕ್‌ ಡಿಸ್ಟ್ರಿಬ್ಯೂಟರ್‌, 1999. 81-7310-121-3. ದಿ ಅಲ್ಜಿಬ್ರಾ ಆಫ್‌ ಇನ್ಫೈನೈಟ್‌ ಜಸ್ಟಿಸ್‌. . ಫ್ಲಮಿಂಗೊ, 2002. 0-00-714949-2. ಪ್ರಬಂಧಗಳ ಸಂಕಲನ: "ದಿ ಎಂಡ್‌ ಆಫ್‌ ಇಮ್ಯಾಜಿನೇಷನ್‌," "ದಿ ಗ್ರೇಟರ್‌ ಕಾಮನ್‌ ಗುಡ್‌," "ಪವರ್‌ ಪಾಲಿಟಿಕ್ಸ್‌", "ದಿ ಲೇಡಿಸ್‌ ಹ್ಯಾವ್‌ ಫೀಲಿಂಗ್ಸ್‌, ಸೊ...," "ದಿ ಅಲ್ಜಿಬ್ರಾ ಆಫ್‌ ಇನ್ಫೈನೈಟ್ ಜಸ್ಟಿಸ್‌," "ವಾರ್‌ ಇಸ್‌ ಪೀಸ್‌," "ಡೆಮೊಕ್ರಸಿ," "ವಾರ್‌ ಟಾಕ್‌", ಮತ್ತು "ಕಮ್‌ ಸೆಪ್ಟೆಂಬರ್‌." ಪವರ್‌ ಪಾಲಿಟಿಕ್ಸ್‌ . ಕೇಂಬ್ರಿಡ್ಜ್‌: ಸೌತೆಂಡ್‌ ಪ್ರೆಸ್‌, 2002. 0-89608-668-2. ವಾರ್‌ ಟಾಕ್‌ . ಕೇಂಬ್ರಿಡ್ಜ್‌: ಸೌತೆಂಡ್‌ ಪ್ರೆಸ್‌, 2003. 0-89608-724-7. ಫೋರ್‌ವರ್ಡ್‌ ಟು ನೋಮ್‌ ಚೋಮ್ಸ್ಕಿ, ಫಾರ್‌ ರೀಸನ್ಸ್‌ ಆಫ್‌ ಸ್ಟೇಟ್‌ . 2003. 1-56584-794-6. ಆನ್‌ ಆರ್ಡಿನರಿ ಪರ್ಸನ್ಸ್‌ ಗೈಡ್‌ ಡು ಎಂಪೈಯರ್‌ . ಕನ್ಸಾರ್ಟಿಯಮ್‌, 2004. 0-89608-727-1. ಪಬ್ಲಿಕ್‌ ಪವರ್‌ ಇನ್‌ ದಿ ಏಜ್‌ ಆಫ್‌ ಎಂಪೈಯರ್‌ ಸೆವೆನ್‌ ಸ್ಟೋರೀಸ್‌ ಪ್ರೆಸ್‌, 2004. 1-58322-682-6. ದಿ ಚೆಕ್‌ಬುಕ್‌ ಅಂಡ್‌ ದಿ ಕ್ರೂಯಿಸ್‌ ಮಿಸ್ಸೈಲ್‌: ಕಾನ್ವರ್ಸೇಷನ್ಸ್‌ ವಿತ್‌ ಅರುಂಧತಿ ರಾಯ್‌ . (ಡೇವಿಡ್ ಬರ್ಸಮಿಯನ್ ನಡೆಸಿದ ಸಂದರ್ಶನಗಳು). ಕೇಂಬ್ರಿಡ್ಜ್‌: ಸೌತೆಂಡ್‌ ಪ್ರೆಸ್‌, 2004. 0-89608-710-7. ಇಂಟ್ರೊಡಕ್ಷನ್‌‌ ಟು 13 ಡಿಸೆಂಬರ್‌, ಎ ರೀಡರ್‌: ದಿ ಸ್ಟ್ರೇಂಜ್‌ ಕೇಸ್‌ ಆಫ್‌ ದಿ ಅಟ್ಯಾಕ್‌ ಆನ್‌ ದಿ ಇಂಡಿಯನ್‌ ಪಾರ್ಲಿಯಮೆಂಟ್‌ ನವದೆಹಲಿ, ನ್ಯೂಯಾರ್ಕ್‌: ಪೆಂಗ್ವಿನ್‌, 2006. 0-14-310182-. ದಿ ಷೇಪ್‌ ಆಫ್‌ ದಿ ಬೀಸ್ಟ್‌: ಕಾನ್ವರ್ಸೇಷನ್ಸ್‌ ವಿತ್‌ ಅರುಂಧತಿ ರಾಯ್‌ . ನ್ಯೂ ಡೆಲ್ಲಿ: ಪೆಂಗ್ವಿನ್‌, ವೈಕಿಂಗ್‌, 2008. 978-0-670-08207-0. ಲಿಸೆನಿಂಗ್‌ ಟು ಗ್ರ್ಯಾಸ್‌ಹಾಪರ್ಸ್‌: ಫೀಲ್ಡ್‌ ನೋಟ್ಸ್‌ ಆನ್‌ ಡೆಮೊಕ್ರಸಿ . ನ್ಯೂ ಡೆಲ್ಲಿ: ಪೆಂಗ್ವಿನ್‌, ಹ್ಯಾಮಿಷ್‌ ಹ್ಯಾಮಿಲ್ಟನ್‌, 2009. 978-0-670-08379-4. === ಭಾಷಣಗಳು, ಪ್ರಬಂಧಗಳು, ಸಂದರ್ಶನಗಳು === 'ವಿ,' ಅರುಂಧತಿ ರಾಯ್‌ ಅವರ ಕೃತಿಗಳ ಪರಿಚಯ ನೀಡುವ ಒಂದು ಸಾಕ್ಷ್ಯಚಿತ್ರ ಕಮ್‌ ಸೆಪ್ಟೆಂಬರ್‌ 2010-07-28 ವೇಬ್ಯಾಕ್ ಮೆಷಿನ್ ನಲ್ಲಿ. 2002ರ ಸೆಪ್ಟೆಂಬರ್‌ 18ರಂದು ನೀಡಿದ ಭಾಷಣದ ಪ್ರತಿಲಿಪಿ, ಹಾಗೂ ಹವಾರ್ಡ್‌ ಜಿನ್‌ರೊಂದಿಗೆ ಸಂವಾದ ಭಾರತ, ಇರಾಕ್‌, ಅಮೆರಿಕಾ ಸಾಮ್ರಾಜ್ಯ ಮತ್ತು ಅಸಮ್ಮತಿ - ಡೆಮೊಕ್ರಸಿ ನೌ! ವಾಹಿನಿಯಲ್ಲಿ ಸಂದರ್ಶನ. 'ವಿ ಹ್ಯಾವ್‌ ಟು ಬಿಕಮ್‌ ದಿ ಗ್ಲೋಬಲ್‌ ರಿಸಿಸ್ಟೆನ್ಸ್‌' 2006-09-28 ವೇಬ್ಯಾಕ್ ಮೆಷಿನ್ ನಲ್ಲಿ. 2004ರ ಜನವರಿ 16ರಂದು ವಿಶ್ವ ಸಮಾಜ ವೇದಿಕೆಯಲ್ಲಿ ನೀಡಿದ ಭಾಷಣದ ಸಂಕ್ಷಿಪ್ತ ಆವೃತ್ತಿ) ಟೈಡ್‌? 2007-11-15 ವೇಬ್ಯಾಕ್ ಮೆಷಿನ್ ನಲ್ಲಿ.ಆರ್‌ ಐವರಿ ಷೋ? 2007-11-15 ವೇಬ್ಯಾಕ್ ಮೆಷಿನ್ ನಲ್ಲಿ.ಪಬ್ಲಿಕ್‌ ಪವರ್‌ ಇನ್‌ ದಿ ಏಜ್‌ ಆಫ್‌ ಎಂಪೈಯರ್‌‌ 2007-11-15 ವೇಬ್ಯಾಕ್ ಮೆಷಿನ್ ನಲ್ಲಿ. (ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ 2004ರ ಆಗಸ್ಟ್‌ 16ರಂದು ನೀಡಿದ ಭಾಷಣ) ಎಬಿಸಿ ರೇಡಿಯೊ ನ್ಯಾಷನಲ್‌ ಸಿಡ್ನಿ ಶಾಂತಿ ಪ್ರಶಸ್ತಿ ಸಮಾರಂಭದಂದು ನೀಡಲಾದ ಭಾಷಣದ ಪ್ರತಿಲಿಪಿ 2009-01-01 ವೇಬ್ಯಾಕ್ ಮೆಷಿನ್ ನಲ್ಲಿ. (ಧ್ವನಿಪಥದೊಂದಿಗೆ) ಅಥವಾ ಭಾಷಣವನ್ನು ಇಲ್ಲಿ ಡೌನ್ಲೋಡ್‌ ಮಾಡಿ 2008-12-02 ವೇಬ್ಯಾಕ್ ಮೆಷಿನ್ ನಲ್ಲಿ. 'ದಿ ಮೋಸ್ಟ್‌ ಕವರ್ಡ್ಲಿ ವಾರ್‌ ಇನ್‌ ಹಿಸ್ಟರಿ'; ಇರಾಕ್‌ ನ್ಯಾಯಮಂಡಳಿಯಲ್ಲಿ ಆರಂಭಿಕ ವಾಕ್ಯ (ಲೇಖನದ ದಿನಾಂಕ 24 ಜೂನ್‌ 2005) ಷಾಂಘೈ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವದಲ್ಲಿ ಅರುಂಧತಿ ರಾಯ್‌ ಮತ್ತು ಪಂಕಜ್‌ ಮಿಶ್ರಾ 'ಇಂಡಿಯಾ ಇನ್‌ ದಿ ವರ್ಲ್ಡ್‌' ಎಂಬ ವಿಷಯದ ಬಗ್ಗೆ ನಡೆಸಿದ ಚರ್ಚೆಯ ಪಾಡ್‌ಕ್ಯಾಸ್ಟ್‌ 2010-10-28 ವೇಬ್ಯಾಕ್ ಮೆಷಿನ್ ನಲ್ಲಿ. ಭಾರತದ ಆರ್ಥಿಕ ಬೆಳವಣಿಗೆ, ನವದೆಹಲಿಯಲ್ಲಿ ಒಬಾಮಾರ ಹೇಳಿಕೆ, ಹಾಗೂ ಅಫ್‌-ಪಾಕ್‌ (ಅಫ್ಘಾನಿಸ್ಥಾನ-ಪಾಕಿಸ್ತಾನ)ದಲ್ಲಿ ಹೆಚ್ಚಾಗುತ್ತಿರುವ ಅಮೆರಿಕಾ ದಾಳಿಯ ಬಗ್ಗೆ ಅರುಂಧತಿ ಅಭಿಪ್ರಾಯ ಧ್ವನಿಪಥ: ದಿ ಫೋರಮ್‌ ಬಿಬಿಸಿ ವರ್ಲ್ಡ್‌ ಸರ್ವಿಸ್‌ ಚರ್ಚಾ ಕಾರ್ಯಕ್ರಮದಲ್ಲಿ ಅರುಂಧತಿ ರಾಯ್‌ ಸಂಭಾಷಣೆ ಒಬಾಮಾರ ಯುದ್ಧಗಳು, ಭಾರತ ಹಾಗೂ ಪ್ರಜಾಪ್ರಭುತ್ವವೆಂಬುದು ಏಕ 'ವಿಶ್ವದ ಅತಿದೊಡ್ಡ ಹಗರಣ'ವಾಗಿದೆ ಎಂಬ ವಿಷಯಗಳ ಬಗ್ಗೆ ಅರುಂಧತಿ ರಾಯ್‌ ಅಭಿಪ್ರಾಯ "ಇನ್‌ ದಿ ವ್ಯಾಲಿ ಆಫ್‌ ದಿ ಟೈಗರ್ಸ್‌" 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.; ನರ್ಮದಾ ಕಣಿವೆಯ ಕುರಿತು ಅಸೆಂಟ್‌ ಪತ್ರಿಕೆಯೊಡನೆ ಸಂದರ್ಶನ ಘಾಂಡಿ ಬಟ್‌ ನಾಟ್‌ ವಿತ್‌ ಗನ್ಸ್‌ – ..ukದಲ್ಲಿ ನಕ್ಸಲರ ಬಗ್ಗೆ ಒಂದು ಪ್ರಬಂಧ (2010-03-27) ಫಾಲ್ಟ್‌ ಲೈನ್ಸ್‌ – ಅರುಂಧತಿ ರಾಯ್‌ (ವೀಡಿಯೊ) – ಅಲ್‌ ಜಝೀರಾ ಇಂಗ್ಲಿಷ್‌ ಕಿರುತೆರೆ ವಾಹಿನಿಯಲ್ಲಿ ಅರುಂಧತಿ ರಾಯ್‌ ಒಂದಿಗೆ ಸಂದರ್ಶನ (2010-05-06ರಂದು ಮರುಸಂಪಾದಿಸಲಾಯಿತು) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅರುಂಧತಿ ರಾಯ್‌ ಅರುಂಧತಿ ರಾಯ್‌ (ಕಾಶ್ಮೀರ ರಾಜ್ಯದ ಮೇಲೆ ಭಾರತದ ಹಕ್ಕನ್ನು ಪ್ರಶ್ನಿಸಿದ್ದಕ್ಕೆ ಬಂಧನದ ಸ್ಥಿತಿ ಎದುರಿಸಲಿರುವ ಅರುಂಧತಿ ರಾಯ್‌ - ಡೆಮೊಕ್ರಸಿ ನೌ! ವಾಹಿನಿಯಲ್ಲಿ ವೀಡಿಯೊ ವರದಿ) (ಒಬಾಮಾರ ಯುದ್ಧಗಳು, ಬಡತನ ಮತ್ತು ಭಾರತದ ಮಾವೊವಾದಿ ಬಂಡುಕೋರರ ಬಗ್ಗೆ ಅರುಂಧತಿ ಅಭಿಪ್ರಾಯಗಳು - ಡೆಮೊಕ್ರಸಿ ನೌ! ವೀಡಿಯೊ ಸಂದರ್ಶನ)